ಕಲಬುರ್ಗಿ: ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಕೊಲೆ ಪ್ರಕರಣದಲ್ಲಿ ಒಬ್ಬ ಮಹಿಳೆ ಮತ್ತು ಯುವಕನ ಹತ್ಯೆ ಮಾಡಲಾಗಿದೆ.
ಜಿಲ್ಲೆಯ ಚಿತ್ತಾಪುರ ತಾಲ್ಲೂಕು ಶಹಾಬಾದ ಪಟ್ಟಣದಲ್ಲಿ ಭಾನುವಾರ ಪತಿಯೆ ಪತ್ನಿಯನ್ನು ಕೊಲೆ ಮಾಡಿದ್ದಾರೆ.
ಶಿವಮ್ಮ (30) ಮೃತಪಟ್ಟವರು. ನಾಗಪ್ಪ ಕೊಲೆ ಮಾಡಿದ ವ್ಯಕ್ತಿ.
ನಾಗಪ್ಪ ಸಾಕಷ್ಟು ಸಾಲ ಮಾಡಿದ್ದರು. ಇದನ್ನು ಪ್ರಶ್ನಿಸಿದ ಪತ್ನಿ ಶಿವಮ್ಮಗೆ ಪತಿ ಕೊಡಲಿಯಿಂದ ತಲೆಗೆ ಹೊಡೆದಿದ್ದಾನೆ. ತೀವ್ರ ರಕ್ತ ಸ್ರಾವವಾಗಿ ಶಿವಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಕೊಲೆ ಮಾಡಿದ ನಾಗಪ್ಪ ತಲೆ ಮರೆಸಿಕೊಂಡಿದ್ದು, ಶಹಾಬಾದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಕುವಿನಿಂದ ಇರಿದು ಯುವಕನ ಕೊಲೆ
ಕಲಬುರ್ಗಿಯ ಬ್ರಹ್ಮಪುರ ಬಡಾವಣೆಯಲ್ಲಿ ಚಾಕುವಿನಿಂದ ಇರಿದು ಯುವಕನೊಬ್ಬನನ್ನು ಕೊಲೆ ಮಾಡಲಾಗಿದೆ.
ಸಂಗಮೇಶ ಸಿದ್ರಾಮಪ್ಪ ನಂದರಗಿ (18) ಮೃತಪಟ್ಟ ವ್ಯಕ್ತಿ.
ಬ್ರಹ್ಮಪುರದ ರಾಯರ ಗುಡಿ ಹತ್ತಿರದಲ್ಲಿ ದುಷ್ಕರ್ಮಿಗಳ ಗುಂಪು ಆತನ ಮೇಲೆ ದಾಳಿ ಮಾಡಿದೆ. ಘಟನೆ ನೋಡಿದ ರಾಯರ ಗುಡಿ ಸುತ್ತ ಮುತ್ತಲಿನ ಬಡಾವಣೆ ಜನರು ತಲ್ಲಣಿಸಿದ್ದಾರೆ.
ಗ್ಯಾಂಗ್ ವಾರ್ ಎನ್ನಲಾಗಿದೆ. ಕೊಲೆಗೆ ಕಾರಣ ಗೊತ್ತಾಗಿಲ್ಲ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಜನರು ತಮಗೇನೂ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಗಾಯಗೊಂಡಿದ್ದ ಈತ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾನೆ.