ಬೆಂಗಳೂರು: ‘ವಿಧಾನಸೌಧ ವಜ್ರಮಹೋತ್ಸವಕ್ಕೆ ₹ 10 ಕೋಟಿ ಖರ್ಚು ಮಾಡದಂತೆ ವಿಧಾನಸಭಾಧ್ಯಕ್ಷ, ಹಣಕಾಸು ಇಲಾಖೆ ಕಾರ್ಯದರ್ಶಿ ಹಾಗೂ ವಿಧಾನಸಭಾ ಕಾರ್ಯದರ್ಶಿಗೆ ನಿರ್ದೇಶಿಸಬೇಕು’ ಎಂದು ಕೋರಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.
ವಕೀಲ ಎಸ್.ಎನ್.ಅರವಿಂದ ದಾಖಲಿಸಿರುವ ಈ ಅರ್ಜಿ ಇನ್ನೂ ವಿಚಾರಣೆಗೆ ಬರಬೇಕಿದೆ.
ಆಕ್ಷೇಪ ಏನು?: ‘ಸರ್ಕಾರ ವ್ಯಯಿಸಬೇಕೆಂದಿರುವ ₹ 10 ಕೋಟಿ ಮೊತ್ತ ಸಾರ್ವಜನಿಕರ ತೆರಿಗೆ ಹಣ. ಇದನ್ನು ಜನರ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಬೇಕು’ ಎಂಬುದು ಅರ್ಜಿದಾರರ ಆಕ್ಷೇಪ.
‘ಹಣವನ್ನು ಯಾವ ರೀತಿ ವಿನಿಯೋಗಿಸಲಾಗುತ್ತಿದೆ ಎಂಬ ಬಗ್ಗೆ ವಿವರ ಕೊಡಿ ಎಂದು ನಾವು ವಿಧಾನಸಭಾಧ್ಯಕ್ಷರಿಗೆ ಮನವಿ ಮಾಡಿದ್ದೆವು. ಆದರೆ ಅವರು ಈ ಕುರಿತು ಯಾವುದೇ ನಿಖರ ಉತ್ತರ ನೀಡಿಲ್ಲ. ಆದ್ದರಿಂದ ಅನಿವಾರ್ಯವಾಗಿ ಈ ಪಿಐಎಲ್ ದಾಖಲಿಸಲಾಗುತ್ತಿದೆ’ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ವಿಧಾನಸೌಧ ನಿರ್ಮಿಸಿ 60 ವರ್ಷ ಪೂರ್ಣಗೊಂಡಿರುವ ಕಾರಣ ಇದೇ 25ರಂದು ₹ 10 ಕೋಟಿ ವ್ಯಯಿಸಿ ವಜ್ರಮಹೋತ್ಸವ ಆಚರಿಸಲು ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಸಚಿವಾಲಯ ನಿರ್ಧರಿಸಿದೆ.