ಜಮ್ಮು: ಜಮ್ಮು ಮತ್ತು ಕಾಶ್ಮೀರ, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ನಡುವಣ ಗಡಿ ನಿಯಂತ್ರಣ ರೇಖೆ ದಾಟಿ ವ್ಯಾಪಾರ ನಡೆಸುವುದಕ್ಕೆ ನಿರ್ಬಂಧ ಹೇರಿದ್ದರಿಂದ ಕಳೆದ 16 ವಾರಗಳಲ್ಲಿ ₹ 80 ಕೋಟಿಗೂ ಅಧಿಕ ನಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನ ಕಡೆಯಿಂದ ತೀವ್ರವಾದ ಗುಂಡು ಹಾಗೂ ಶೆಲ್ ದಾಳಿ ನಡೆದ ಪರಿಣಾಮವಾಗಿ ಗಡಿ ನಿಯಂತ್ರಣ ರೇಖೆ ಬಳಿಯ ವ್ಯಾಪಾರಿ ಕೇಂದ್ರಗಳು ಹಾಗೂ ಪೊಲೀಸ್ ಬ್ಯಾರಕ್ಗಳಿಗೆ ಹಾನಿ ಉಂಟಾಗಿದೆ. ಇದರಿಂದಾಗಿ ಗಡಿ ನಿಯಂತ್ರಣ ರೇಖೆ ದಾಟಿ ವಹಿವಾಟು ನಡೆಸುವುದನ್ನು ಜುಲೈ 11ರಿಂದ ತಡೆಹಿಡಿಯಲಾಗಿದೆ. ಪೂಂಚ್ ಮತ್ತು ರಾವಲ್ಕೋಟ್ ನಡುವೆ ರಸ್ತೆ ಸಾರಿಗೆಯನ್ನೂ ನಿರ್ಬಂಧಿಸಲಾಗಿದೆ.
ಗಡಿ ನಿಯಂತ್ರಣ ರೇಖೆಯಾಚೆಗಿನ ವ್ಯಾಪಾರ ಮತ್ತು ಸಾರಿಗೆ ವ್ಯವಸ್ಥೆಯು ಭಾರತ–ಪಾಕಿಸ್ತಾನ ನಡುವೆ ಪರಸ್ಪರ ವಿಶ್ವಾಸ ಹೆಚ್ಚಿಸುವ ಪ್ರಮುಖ ಮಾರ್ಗ ಎಂದು ನಂಬಲಾಗಿದೆ. 2008ರಲ್ಲಿ ಈ ಸೌಲಭ್ಯ ಆರಂಭವಾದ ನಂತರ ಈವರೆಗೆ ₹ 1,500 ಕೋಟಿ ವಹಿವಾಟು ನಡೆದಿದೆ.