ನವದೆಹಲಿ: ಭಾರತ, ನ್ಯೂಜಿಲೆಂಡ್ ಎರಡನೇ ಏಕದಿನ ಪಂದ್ಯದ ವೇಳೆ ಹಣ ಪಡೆದು ಬುಕ್ಕಿಗಳಿಗೆ ಪಿಚ್ ರಿಪೋರ್ಟ್ ನೀಡಲು ಮುಂದಾಗಿದ್ದರು ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಪುಣೆ ಕ್ರಿಕೆಟ್ ಮೈದಾನ ಪಿಚ್ ಕ್ಯುರೇಟರ್ ಪಾಂಡುರಂಗ ಸಲಗಾಂವ್ಕರ್ ಅವರನ್ನು ಬಿಸಿಸಿಐ ಅಮಾನತು ಮಾಡಿದೆ.
ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಬ್ ಚೌಧರಿ ಅವರು ಪಿಚ್ ಕ್ಯುರೇಟರ್ ಪಾಂಡುರಂಗ ಸಲಗಾಂವ್ಕರ್ ಅವರನ್ನು ಅಮಾನತು ಮಾಡಿದ್ದಾರೆ.
ಇಂಡಿಯಾ ಟುಡೆ ಸುದ್ದಿ ವಾಹಿನಿ ನಡೆಸಿದ ಕುಟುಕು ಕಾರ್ಯಾಚರಣೆ ವೇಳೆ ಪಾಂಡುರಂಗ ಸಲಗಾಂವ್ಕರ್ ಇದು ಬ್ಯಾಟಿಂಗ್ ಪಿಚ್ ಆಗಿದ್ದು ಇಲ್ಲಿ 340 ರನ್ಗಳನ್ನು ಸುಲಭವಾಗಿ ಗಳಿಸಬಹುದು ಎಂದು ಹೇಳಿದ್ದರು. ಪಾಂಡುರಂಗ ಸಲಗಾಂವ್ಕರ್ ಅವರು ಈ ಮಾಹಿತಿಯನ್ನು ಕ್ರಿಕೆಟ್ ಬುಕ್ಕಿಗಳ ಜತೆ ಹಂಚಿಕೊಂಡಿರುವ ಸಾಧ್ಯತೆಗಳಿವೆ ಎಂದು ಇಂಡಿಯಾ ಟುಡೆ ವರದಿ ಮಾಡಿತ್ತು.
ಬಿಸಿಸಿಐ ನಿಯಮಗಳ ಪ್ರಕಾರ ಪಂದ್ಯ ಆರಂಭಕ್ಕೂ ಮುನ್ನ ಪಿಚ್ ಮಾಹಿತಿ ನೀಡುವಂತಿಲ್ಲ. ಹಾಗೂ ಕ್ರಿಕೆಟ್ ಆಡುವ ಆಟಗಾರರಿಗೂ ಪಿಚ್ ಮಾಹಿತಿ ನೀಡುವಂತಿಲ್ಲ.