‘ನಾನು ಮತ್ತು ನಿರ್ಮಾಪಕ ಎಂ.ಎನ್. ಕುಮಾರ್ ಇಷ್ಟು ದಿನ ಕಾದು ಕೊನೆಗೂ ಗಂಡು ಮಗುವನ್ನೇ ಹೆತ್ತಿದ್ದೀವಿ’
ರವಿ ಶ್ರೀವತ್ಸ ಯಾವ ಸಿಗ್ಗೂ ಇಲ್ಲದೆ ಹೆಮ್ಮೆಯಿಂದ ‘ಗಂಡು ಮಗು’ ಎಂಬ ಹೋಲಿಕೆಯನ್ನು ಕೊಟ್ಟಿದ್ದು ತಮ್ಮ ನಿರ್ದೇಶನದ ಹೊಸ ಸಿನಿಮಾ ‘ಟೈಗರ್ ಗಲ್ಲಿ’ಗೆ. ಇಂದು (ಅ.27) ಬಿಡುಗಡೆಯಾಗುತ್ತಿರುವ ಸಿನಿಮಾ ಅವರಿಗೆ ‘ಗಂಡು’ ಅನಿಸಿದೆ. ‘ಯಾಕೆ ಈ ಹೋಲಿಕೆ?’ ಎಂದು ಪ್ರಶ್ನಿಸಿದಾಗಲೂ ಅವರು ‘ಗಂಡು ಮಗು ಹುಟ್ಟಿದಾಗ ಮನೆಯಲ್ಲಿ ಎಲ್ಲರಿಗೂ ಸಂತೋಷವಾಗುತ್ತದೆ’ ಎಂದು ಹೇಳಿದರು.
‘ಇದು ಕೆಟ್ಟ ಹೋಲಿಕೆ’ ಎಂದು ಅವರ ಮಾತಿಗೆ ಪತ್ರಕರ್ತರಿಂದ ವಿರೋಧ ವ್ಯಕ್ತವಾದಾಗ ತಕ್ಷಣ ‘ಕ್ಷಮಿಸಿ’ ಎಂದು ಚಿತ್ರದ ಬಗ್ಗೆ ಮಾಹಿತಿ ನೀಡಲು ಮುಂದಾದರು.
‘ಸಿನಿಮಾ ಲಾಜಿಕ್ ಅಲ್ಲ, ಮ್ಯಾಜಿಕ್’ ಎನ್ನುವುದು ರವಿ ಅವರ ಅಭಿಮತ. ‘ಇದುವರೆಗೆ ಬೆಂಕಿ ಉಗುಳುವುದನ್ನು ನೋಡಿರ್ತೀರಾ. ಆದರೆ ಈ ಸಿನಿಮಾದಲ್ಲಿ ಬೆಂಕಿ ಮುಖದ ಮೇಲೆ ಬರುವುದನ್ನು ನೋಡುತ್ತೀರಾ’ ಎಂದೂ ಅವರು ಹೇಳಿದರು.
ಇದೇ ಸಮಯದಲ್ಲಿ ‘ಟೈಗರ್ ಗಲ್ಲಿ’ ಕುರಿತಾಗಿ ನೀನಾಸಂ ಸತೀಶ್ ಅವರಿಗೆ ನಿರ್ದೇಶಕ ಪ್ರೇಮ್, ನಟ ಶಿವರಾಜಕುಮಾರ್, ದುನಿಯಾ ವಿಜಯ್, ಯೋಗರಾಜ ಭಟ್ ಅವರೆಲ್ಲ ಶುಭ ಹಾರೈಸುವ ಪ್ರಮೋಷನ್ ವಿಡಿಯೊವನ್ನೂ ತೋರಿಸಲಾಯಿತು.
‘ಇದುವರೆಗೆ ನಮ್ಮ ಚಿತ್ರದ ಬಗ್ಗೆ ಸುಮಾರು ಮೂರರಿಂದ ನಾಲ್ಕು ಕೋಟಿ ಜನರು ಮಾಹಿತಿ ಪಡೆದುಕೊಂಡಿದ್ದಾರೆ. ನನಗೆ ಕೊಟ್ಟ ಭರವಸೆಗಿಂತ ಅದ್ಭುತವಾಗಿ ನಿರ್ಮಾಪಕರು ಸಿನಿಮಾ ಪ್ರಮೋಶನ್ ಮಾಡಿದ್ದಾರೆ’ ಎಂದರು ನೀನಾಸಂ ಸತೀಶ್.
ನಾಯಕಿಯರಾದ ರೋಶಿನಿ, ಭಾವನಾ ಧನ್ಯವಾದ ಹೇಳಿ ಮಾತು ಮುಗಿಸಿದರು.
‘ಟ್ರೇಲರ್ ನೋಡಿ ಕುತೂಹಲ ಹುಟ್ಟಿದೆ, ಇದು ಪವರ್ ಪ್ಯಾಕ್ ಸಿನಿಮಾ. ಈ ಚಿತ್ರದ ಬಗ್ಗೆ ನನಗೂ ಕುತೂಹಲ ಇದೆ. ನಾನಿನ್ನೂ ಸಿನಿಮಾ ನೋಡಿಲ್ಲ. ಬಿಡುಗಡೆಯಾದಾಗ ಚಿತ್ರಮಂದಿರದಲ್ಲಿ ಜನರ ಮಧ್ಯ ಕೂತುಕೊಂಡು ಸಿನಿಮಾ ನೋಡಬೇಕು ಎಂದುಕೊಂಡಿದ್ದೇನೆ’ ಎಂದರು ಪೂಜಾ ಲೋಕೇಶ್.
ಈ ಚಿತ್ರದಲ್ಲಿ ಖಳನ ಪಾತ್ರ ಮಾಡಿರುವ ಶಿವಮಣಿ ಅವರು ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ಹುಡುಗನ ಮನಸ್ಥಿತಿಯಲ್ಲಿದ್ದೇನೆ ಎಂದರು. ಹಣ ಹೂಡಿರುವ ಯೋಗೇಶ್ ಕುಮಾರ್ ಅವರಿಗೆ ಇದು ಮೊದಲ ಸಿನಿಮಾ.
ಇನ್ನೂರೈವತ್ತಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ‘ಟೈಗರ್ ಗಲ್ಲಿ’ಯನ್ನು ಬಿಡುಗಡೆ ಮಾಡಲು ತಂಡ ಸಿದ್ಧತೆ ಮಾಡಿಕೊಂಡಿದೆ.
*
– ರವಿ ಶ್ರೀವತ್ಸ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.