ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ಎಕರೆ ಜಾಗ ಮಂಜೂರಿಗೆ ಮನವಿ

Last Updated 27 ಅಕ್ಟೋಬರ್ 2017, 5:04 IST
ಅಕ್ಷರ ಗಾತ್ರ

ದೇವನಹಳ್ಳಿ: ಪ್ರಸ್ತುತ ಜಿಲ್ಲಾ ಕೇಂದ್ರವಾಗಿರುವ ದೇವನಹಳ್ಳಿ ನಗರದ ಹೊರವಲಯದಲ್ಲಿ ರೈತರ ಉತ್ಪನ್ನಗಳ ಮಾರುಕಟ್ಟೆ ನಿರ್ಮಾಣಕ್ಕೆ ಆರು ಎಕರೆ ಜಾಗ ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆನೆ ಎಂದು ಕರ್ನಾಟಕ ರಾಜ್ಯ ಕೃಷಿ ಮಾರುಕಟ್ಟೆ ಸಮಿತಿ ನೂತನ ನಿರ್ದೇಶಕಿ ಅಮರಾವತಿ ಲಕ್ಷ್ಮಿನಾರಾಯಣ್ ಅವರು ತಿಳಿಸಿದರು.

ದೇವನಹಳ್ಳಿ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಕಾಂಗ್ರೆಸ್ ಮುಖಂಡರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ದೊಡ್ಡಬಳ್ಳಾಪುರ ತಾಲ್ಲೂಕು ಕೃಷಿ ಮಾರುಕಟ್ಟೆ ಸಮಿತಿ ಅಧ್ಯಕ್ಷೆಯಾಗಿ ಆಯ್ಕೆಗೊಂಡು ಹಲವು ತಿಂಗಳಲ್ಲಿ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಯಾವ ರೀತಿ ಸಂಕಷ್ಟದಿಂದ ಮಾರಾಟ ಮಾಡುತ್ತಿದ್ದಾರೆ ಎಂಬ ಅರಿವು ನನಗಿದೆ ಎಂದರು.

ನಾನು ಸಹ ಗ್ರಾಮೀಣ ಪ್ರದೇಶದ ರೈತರ ಮಗಳು. ನಮ್ಮ ಕುಟುಂಬ ತೋಟಗಾರಿಕೆ ಮತ್ತು ಕೃಷಿಯನ್ನು ಅವಲಂಬಿಸಿದೆ. ಒಂದು ಸಾವಿರ ಬಂಡವಾಳ ಹಾಕಿದರೆ ಐದುನೂರು ಬೆಳೆ ಉತ್ಪನ್ನದಿಂದ ಬರುವುದು ಕಷ್ಟವಾಗುತ್ತಿದೆ. ಬೆಳೆ ಉತ್ಪನ್ನಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಬಯಲಲ್ಲಿ, ರಸ್ತೆ ಅಕ್ಕಪಕ್ಕ ರೈತರು ಬಲವಂತವಾಗಿ ಮಧ್ಯವರ್ತಿಗಳಿಗೆ ಮಾರಾಟ ಮಾಡುವಂತಾಗಿದೆ. ರೈತರಿಗೆ ಸಿಗಬೇಕಾದ ಲಾಭಾಂಶ ಮಧ್ಯವರ್ತಿಗಳ ಪಾಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಮಾರುಕಟ್ಟೆ ಅತ್ಯಂತ ಪ್ರಮುಖ ಎಂದರು.

ಕಳೆದ ನಾಲ್ಕು ವರ್ಷಗಳ ಸತತ ಬರಗಾಲದ ನಡುವೆ ಈ ವರ್ಷ ಉತ್ತಮ ವರ್ಷಧಾರೆಯಾಗಿ ಫಸಲು ಉತ್ತಮ ಇಳುವರಿಯ ನಿರೀಕ್ಷೆಯಲ್ಲಿ ರೈತರಿದ್ದಾರೆ, ಬತ್ತಿ ಹೋಗಿದ್ದ ಕೊಳವೆ ಬಾವಿಗಳಲ್ಲಿ ಅಂತರ್ಜಲದ ಮಟ್ಟ ಏರಿಕೆಯಾಗಿದೆ. ಪ್ರಸ್ತುತ ತೋಟಗಾರಿಕಾ ಬೆಳೆ ನಿರೀಕ್ಷೆ ಮೀರಿ ಇಳುವರಿ ಸಾಧ್ಯತೆ ಇದ್ದು ಇನ್ನೆರಡು ಮೂರು ತಿಂಗಳಲ್ಲಿ ಜಮೀನು ಸ್ವಾಧೀನ ಪಡೆದು ಕಾಮಗಾರಿ ಆರಂಭಿಸುವ ಚಿಂತನೆ ಇದೆ. ಪ್ರಸ್ತುತ ತಾತ್ಕಾಲಿಕವಾಗಿ ಹಳೆ ಬಸ್ ನಿಲ್ದಾಣದಲ್ಲಿರುವ 30 ಗುಂಟೆ ಜಾಗದಲ್ಲಿ ದಿನನಿತ್ಯದ ಮಾರುಕಟ್ಟೆ ವ್ಯವಸ್ಥೆ ಮಾಡಲಾಗುವುದು ಎಂದರು.

ಶತಮಾನಗಳಿಂದ ತಾಲ್ಲೂಕಿನಲ್ಲಿ ರೈತರಿಗೆ ಮಾರುಕಟ್ಟೆ ವ್ಯವಸ್ಥೆ ಇಲ್ಲ, ಬೆಂಗಳೂರು ನಗರದ ಕೆ.ಆರ್.ಮಾರುಕಟ್ಟೆ,ಯಲಹಂಕ ರೈತರ ಸಂತೆ, ಚಿಕ್ಕಬಳ್ಳಾಪುರ ಮಾರುಕಟ್ಟೆಯನ್ನು ರೈತರು ಅವಲಂಭಿಸಿದ್ದಾರೆ. ಉತ್ಪನ್ನಗಳ ಮಾರಾಟಕ್ಕೆ ವಾಹನ ಬಾಡಿಗೆ ಒಂದೆಡೆಯಾದರೆ ಹತ್ತಾರು ಕೆ.ಜಿ.ತರಕಾರಿ ಮತ್ತು ಪುಷ್ಪಗಳಿಗೂ ನಗರ ಪ್ರದೇಶಗಳಿಗೆ ರೈತರು ತೆರಳಬೇಕು.

ವ್ಯರ್ಥ ಖರ್ಚು ಮತ್ತು ಸಮಯ ಎರಡು ಉಳಿಸುವುದು ನನ್ನ ಉದ್ದೇಶ, ಇದು ತಾಲ್ಲೂಕಿನ ರೈತರ ಬಹುದಿನಗಳ ಬೇಡಿಕೆಯಾಗಿದೆ. ಇದರ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು.ಜಿಲ್ಲಾ ಪಂಚಾಯಿತಿ ಸದಸ್ಯಜಿ.ಲಕ್ಷ್ಮಿನಾರಾಯಣ, ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ್, ಪುರಸಭೆ ಸದಸ್ಯೆ ಪುಷ್ಪ ರವಿಕುಮಾರ್, ಕಾಂಗ್ರೆಸ್ ಮುಖಂಡ ಚಿನ್ನಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT