ಉಜಿರೆ (ಮಂಗಳೂರು): ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ (ಎಸ್ಕೆಡಿಆರ್ಡಿಪಿ) ಸ್ವಸಹಾಯ ಗುಂಪುಗಳ 12 ಲಕ್ಷ ಸದಸ್ಯರ ಖಾತೆಗಳಲ್ಲಿ ನಗದುರಹಿತ ವಹಿವಾಟು ಅನುಷ್ಠಾನಕ್ಕೆ ಕೈಜೋಡಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇದಕ್ಕಾಗಿ ಹೊಸ ಆ್ಯಪ್ ಒಂದನ್ನು ಸಿದ್ಧಪಡಿಸಲಿದೆ.
ಉಜಿರೆಯಲ್ಲಿ ಭಾನುವಾರ ನಡೆದ ಸಮಾವೇಶದಲ್ಲಿ ಎಸ್ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಮತ್ತು ಎಸ್ಕೆಡಿಆರ್ಡಿಪಿ ಪೋಷಕರೂ ಆಗಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಒಪ್ಪಂದಕ್ಕೆ ಸಹಿ ಹಾಕಿದರು. ಪ್ರಧಾನಿ ನರೇಂದ್ರ ಮೋದಿ ಅವರ ಉಪಸ್ಥಿತಿಯಲ್ಲೇ ಈ ಒಪ್ಪಂದ ನಡೆಯಿತು.
‘ಎಸ್ಕೆಡಿಆರ್ಡಿಪಿ ಮತ್ತು ಸ್ವಸಹಾಯ ಗುಂಪುಗಳ ನಡುವೆ ನಗದುರಹಿತ ವಹಿವಾಟುನಡೆಸುವುದಕ್ಕೆ ಎಸ್ಬಿಐ ಭೀಮ್ಆ್ಯಪ್ ಸಿದ್ಧಪಡಿಸಲಾಗುತ್ತಿದೆ’ ಎಂದು ಎಸ್ಬಿಐ ಚಿಲ್ಲರೆ ಮತ್ತು ಡಿಜಿಟಲ್ ಬ್ಯಾಂಕಿಂಗ್ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ಕುಮಾರ್ ಗುಪ್ತ ಹೇಳಿದರು.
‘ಎಸ್ಕೆಡಿಆರ್ಡಿಪಿ ಬ್ಯಾಂಕ್ ಮತ್ತು ಬ್ಯಾಂಕ್ನಿಂದ ಸಾಲ ಪಡೆದಿರುವ ಸ್ವಸಹಾಯ ಗುಂಪುಗಳ ಸದಸ್ಯರ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡಲಿದೆ. ಆ್ಯಪ್ ಮೂಲಕ ಸ್ವಸಹಾಯ ಗುಂಪುಗಳ ಸದಸ್ಯರು ಎಸ್ಕೆಡಿಆರ್ಡಿಪಿ ಮೂಲಕ ಬ್ಯಾಂಕ್ಗೆ ಹಣ ಸಂದಾಯ ಮಾಡಬಹುದು. ಹಾಗೆಯೇ ಬ್ಯಾಂಕ್ಗಳಿಂದ ಹಣ ಪಡೆಯಬಹುದು. ಇದೇ ಮೊದಲಿಗೆ ಬ್ಯಾಂಕ್ ಮಧ್ಯವರ್ತಿಗಾಗಿ ಒಂದು ತಂತ್ರಾಂಶ ಸಿದ್ಧಪಡಿಸುತ್ತಿದೆ’ ಎಂದು ತಿಳಿಸಿದರು.
‘ಎಸ್ಬಿಐ ಸ್ವಸಹಾಯ ಗುಂಪುಗಳಲ್ಲಿ ನಗದುರಹಿತ ವಹಿವಾಟಿಗೆ ಉತ್ತೇಜನ ನೀಡುತ್ತಿದೆ. ನವೆಂಬರ್ ಅಂತ್ಯದ ವೇಳೆಗೆ ಎಸ್ಬಿಐ ಭೀಮ್ ಆ್ಯಪ್ ಬಳಕೆಗೆ ಲಭ್ಯವಾಗಲಿದೆ’ ಎಂದರು.