ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಇಂದಿನ ಸ್ಥಿತಿಗೆ ಹಿಂದಿನ ಯುಪಿಎ ಸರ್ಕಾರವೇ ಕಾರಣ ಎಂದಿರುವ ಪ್ರಧಾನ ಮಂತ್ರಿ ಕಚೇರಿಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಅವರ ಹೇಳಿಕೆಗೆ ತಿರುಗೇಟು ನಿಡಿದ್ದಾರೆ.
ಬಿಜೆಪಿಯ ಜಮ್ಮು ಮತ್ತು ಕಾಶ್ಮೀರ ಘಟಕದ ಕಾರ್ಯಕಾರಿ ಮಂಡಳಿ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇಶವನ್ನು 50 ವರ್ಷಗಳ ಕಾಲ ಆಳಿದ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯದ ಒಟ್ಟೂ ಪರಿಸ್ಥಿತಿಯನ್ನು ಇಂದು ಕಾಶ್ಮೀರದಲ್ಲಿ ನಾವು ಎದುರಿಸಬೇಕಾಗಿದೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
‘ಜಮ್ಮು ಮತ್ತು ಕಾಶ್ಮೀರಕ್ಕೆ ಹೆಚ್ಚಿನ ಸ್ವಾಯತ್ತತೆ ನೀಡುವಂತೆ ಗೃಹ ಖಾತೆಯ ಮಾಜಿ ಸಚಿವರು ಉಪದೇಶ ಮಾಡಿದ್ದನ್ನು ರಾಷ್ಟ್ರ ಒಪ್ಪಲಾರದು’ ಎಂದು ಸಿಂಗ್ ಹೇಳಿದರು.
‘ಕಾಶ್ಮೀರ ಕಣಿವೆಯ ಜನತೆ ಹೆಚ್ಚಿನ ಸ್ವಾಯತ್ತತೆ ಬಯಸುತ್ತಿದ್ದಾರೆ. ನಾನು ನಡೆಸಿದ ಸಂವಾದಗಳಲ್ಲೂ ಈ ಪ್ರಸ್ತಾವ ಕೇಳಿ ಬಂದಿದೆ. ಎಲ್ಲರೂ ಪ್ರತ್ಯೇಕತೆ ಪರವಾಗಿ ಇಲ್ಲ. ಆದರೆ, ಹೆಚ್ಚಿನ ಸವಲತ್ತುಗಳನ್ನು ಒದಗಿಸಬೇಕು’ ಎಂದು ರಾಜಕೋಟ್ದಲ್ಲಿ ಚಿದಂಬರಂ ಹೇಳಿದ್ದರು.