ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿತಿಮೀರಿದ ಬಿಡಾಡಿ ದನಗಳ ಹಾವಳಿ

Last Updated 30 ಅಕ್ಟೋಬರ್ 2017, 6:35 IST
ಅಕ್ಷರ ಗಾತ್ರ

ಗದಗ: ನಗರದಲ್ಲಿ ಬಿಡಾಡಿ ದನಗಳ ಹಾವಳಿ ಮಿತಿ ಮೀರಿದೆ. ನಡು ರಸ್ತೆಯಲ್ಲೇ ಹಾಯಾಗಿ ಮಲಗುವುದು, ಕಾದಾಟಕ್ಕೆ ಇಳಿಯುವುದರಿಂದ ವ್ಯಾಪಾರಸ್ಥರು, ಸಾರ್ವಜನಿಕರು ಮತ್ತು ವಾಹನ ಸವಾರರು ನಿತ್ಯ ಪರದಾಡುವಂತಾಗಿದೆ. ನಗರಸಭೆ ಕಚೇರಿ ಎದುರಿಗಿರುವ ಸ್ಟೇಷನ್ ರಸ್ತೆಯಲ್ಲೇ ಬಿಡಾಡಿ ದನಗಳು ಗುಂಪು ಗುಂಪಾಗಿ ಮಲಗಿರುತ್ತವೆ. ದಿನದಲ್ಲಿ ಹಲವು ಬಾರಿ ನಗರಸಭೆಯ ಆವರಣಕ್ಕೂ ನುಗ್ಗಿ ಹೊರಬರುತ್ತವೆ. ಆದರೆ, ನಗರಸಭೆಯ ಕಣ್ಣಿಗೆ ಮಾತ್ರ ಇದುವರೆಗೆ ಇವು ಬಿದ್ದಿಲ್ಲ.

‘ಮಾಲೀಕರು ರಸ್ತೆಗೆ ದನಗಳನ್ನು ಬಿಡಬಾರದು ಎಂದು ಎರಡು ವರ್ಷದಹಿಂದೆ ಪ್ರಕಟಣೆ ಹೊರಡಿಸಿ ಎಚ್ಚರಿಸಿದ್ದು ಬಿಟ್ಟರೆ, ನಗರಸಭೆ ಇದುವರೆಗೆ ಬಿಡಾಡಿ ದನಗಳ ನಿಯಂತ್ರಣಕ್ಕೆ ಯಾವುದೇ ಗಂಭೀರ ಕ್ರಮ ಕೈಗೊಂಡಿಲ್ಲ’ ಎನ್ನುವುದು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿರುವ ಪ್ರಮುಖ ಆರೋಪ. ನಗರಸಭೆಯ ನಿರ್ಲಕ್ಷ್ಯವನ್ನೇ ದುರುಪಯೋಗಪಡಿಸಿಕೊಂಡಿರುವ ದನಗಳ ಮಾಲೀಕರು, ಜಾನುವಾರುಗಳನ್ನು ರಸ್ತೆಗೆ ಬಿಟ್ಟಿದ್ದಾರೆ.

ಹೀಗಾಗಿ, ಎರಡು ವರ್ಷಗಳ ಹಿಂದೆ 250ರಿಂದ 300 ರಷ್ಟಿದ್ದ ಬಿಡಾಡಿ ದನಗಳ ಸಂಖ್ಯೆ ಈಗ ದುಪ್ಪಟ್ಟಾಗಿದ್ದು, 500ರಿಂದ 600ಕ್ಕೆ ಏರಿದೆ. ಇವುಗಳಿಂದಾಗಿ ನಗರದ ಸಂಚಾರ ವ್ಯವಸ್ಥೆ ಹದಗೆಟ್ಟಿದೆ. ಬಿಸಿಲಿನ ತಾಪ ಹೆಚ್ಚುತ್ತಿದ್ದಂತೆ ಈ ದನಗಳು ನಗರದ ಪ್ರಮುಖ ವೃತ್ತಗಳಲ್ಲಿ, ಮರದ ನೆರಳಲ್ಲಿ, ಇಲ್ಲವೇ ರಸ್ತೆ ಮಧ್ಯದಲ್ಲೇ ಮಲಗುತ್ತವೆ. ರಾತ್ರಿ ಕೂಡ ರಸ್ತೆಯ ಮೇಲೆಯೇ ಠಿಕಾಣಿ ಹೂಡುತ್ತವೆ.

ರಸ್ತೆಯಲ್ಲಿ ಜಾನುವಾರುಗಳ ಓಡಾಟದಿಂದ ಹಲವು ಅಪಘಾತಗಳು ಘಟಿಸಿವೆ. ‘ನಗರಸಭೆಯ ಸಾಮಾನ್ಯ ಸಭೆಯಲ್ಲಿ ಹಿಂದೊಮ್ಮೆ ಈ ವಿಷಯ ಪ್ರಸ್ತಾಪವಾಗಿತ್ತು. ಆದರೆ, ಇದುವರೆಗೆ ಯಾವ ನಿಯಂತ್ರಣ ಕ್ರಮ ಕೈಗೊಂಡಿಲ್ಲ’ ಎಂದು ಸದಸ್ಯರೊಬ್ಬರು ಹೇಳಿದರು.

ಎಲ್ಲೆಲ್ಲಿ ಇವೆ?:  ಬೆಟಗೇರಿ ಹೆಲ್ತ್‌ಕ್ಯಾಂಪ್‌, ಜರ್ಮನ್‌ ಆಸ್ಪತ್ರೆ, ಪಿಬಿ ರಸ್ತೆ ಬಿಡಾಡಿ ದನಗಳ ನೆಚ್ಚಿನ ವಿಹಾರ ಕೇಂದ್ರ. ಈ ರಸ್ತೆಯಲ್ಲಿ ನಿತ್ಯ ಏನಿಲ್ಲವೆಂದರೂ 100ರಿಂದ 150 ಬಿಡಾಡಿ ದನಗಳು ತಿರುಗುತ್ತವೆ. ಸ್ಟೇಷನ್‌ ರಸ್ತೆ, ಗಾಂಧಿ ವೃತ್ತ, ಟಾಂಗಾ ಕೂಟ, ಬಸವೇಶ್ವರ ವೃತ್ತ, ಭೂಮರಡ್ಡಿ ವೃತ್ತ, ಎ.ಪಿ.ಎಂ.ಸಿ, ಎಸ್‌.ಬಿ.ಐ ಬ್ಯಾಂಕ್‌ ಎದುರಿನ ರಸ್ತೆ,
ಹೊಸ ಬಸ್‌ ನಿಲ್ದಾಣ, ತರಕಾರಿ ಮಾರು ಕಟ್ಟೆ, ಟರ್ನಲ್‌ ಪೇಟೆ, ಪುಟ್ಟರಾಜ ಗವಾಯಿ ವೃತ್ತ, ಮಹೇಂದ್ರಕರ ವೃತ್ತ, ಮುಳಗುಂದ ನಾಕಾ, ಹುಯಿಲಗೋಳ ನಾರಾಯಣ ವೃತ್ತ ಇವೆಲ್ಲವೂ ಬಿಡಾಡಿ ದನಗಳಿಗೆ ಪ್ರಿಯವಾದ ಸ್ಥಳಗಳು.

ಬಿಡಾಡಿ ದನಗಳಲ್ಲ, ಸಾಕು ದನಗಳು: ‘ನಗರದಲ್ಲಿರುವ ಬಿಡಾಡಿ ದನಗಳಲ್ಲಿ ಅರ್ಧಕ್ಕಿಂತ ಹೆಚ್ಚಿನವು ಸಾಕುದನಗಳು. ಹಾಲು ಹಿಂಡಿದ ನಂತರ ಜಾನುವಾರು ಮಾಲೀಕರು ಇವುಗಳನ್ನು ಬೀದಿಗೆ ಅಟ್ಟುತ್ತಾರೆ. ದಿನವಿಡೀ ರಸ್ತೆ ಸುತ್ತುತ್ತಾ, ತ್ಯಾಜ್ಯ ಅರಸುವ ಇವು ಸಂಜೆ ಮನೆಗಳಿಗೆ ಮರಳುತ್ತವೆ. ಕೆಲವು ಕಸಾಯಿಖಾನೆ ಮಾಲೀಕರು ಕರುಗಳನ್ನು ಖರೀದಿಸಿ ಅವುಗಳನ್ನು ರಸ್ತೆಗೆ ಬಿಡುತ್ತಾರೆ. ದೊಡ್ಡವಾದ ನಂತರ ಮಾಂಸಕ್ಕಾಗಿ ಉಪಯೋಗಿಸುತ್ತಾರೆ.

ನಗರದಲ್ಲಿ ಬಿಡಾಡಿ ದನಗಳ ಸಂಖ್ಯೆ ಹೆಚ್ಚಲು ಇದು ಪ್ರಮುಖ ಕಾರಣ ಎನ್ನುತ್ತಾರೆ ಬೆಟಗೇರಿಯ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಗಣೇಶ್‌ಸಿಂಗ್‌ ಬ್ಯಾಳಿ. ‘ಜಾನುವಾರು ಮಾಲೀಕರಿಗೆ ರಸ್ತೆಗೆ ಬಿಟ್ಟಿರುವ ದನಗಳನ್ನು ವಾಪಸ್‌ ಹಿಡಿದುಕೊಂಡು ಹೋಗುವಂತೆ ನಗರಸಭೆ ಧ್ವನಿವರ್ಧದ ಮೂಲಕ ಎಚ್ಚರಿಕೆ ನೀಡಬೇಕು. ಒಂದು ವಾರ ಗುಡುವು ನೀಡಬೇಕು.

ಆ ನಂತರವೂ ಬೀದಿಯಲ್ಲಿ ಉಳಿಯುವ ದನಗಳನ್ನು ನಿರ್ದಾಕ್ಷಿಣ್ಯವಾಗಿ ಹಿಡಿದು ಗೋಶಾಲೆಗೆ ಸಾಗಿಸಬೇಕು. ಜಾನುವಾರು ಸಾಕಣೆದಾರರನ್ನು ಪತ್ತೆಹಚ್ಚಿ, ರಸ್ತೆಗೆ ದನಗಳನ್ನು ಬಿಡುವ ಮಾಲೀಕರಿಗೆ ದಂಡ ವಿಧಿಸಬೇಕು.15 ದಿನಗಳ ಒಳಗಾಗಿ ನಗರಸಭೆ ಈ ಕ್ರಮ ಕೈಗೊಳ್ಳದಿದ್ದರೆ ಬೆಟಗೇರಿ ರೈಲ್ವೆ ಹೋರಾಟ ಸಮಿತಿ ವತಿಯಿಂದ ಪ್ರತಿ ಭಟನೆ ನಡೆಸಲಾಗುವುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT