ನವದೆಹಲಿ: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ದತ್ತಿ ತಿದ್ದುಪಡಿ ಕಾಯ್ದೆಯನ್ನು (2011) ಅಸಾಂವಿಧಾನಿಕ ಎಂದು ತಳ್ಳಿ ಹಾಕಿದ್ದ ಕರ್ನಾಟಕ ಹೈಕೋರ್ಟ್ ಆದೇಶದ ವಿರುದ್ಧ ಈ ಹಿಂದೆ ತಾನು ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ದತ್ತಿ ತಿದ್ದುಪಡಿ ಕಾಯ್ದೆ ವಿರುದ್ಧ ಹೈಕೋರ್ಟ್ ನೀಡಿದ್ದ ಆದೇಶದ ಮೇಲಿನ ತಡೆಯಾಜ್ಞೆ ತೆರವುಗೊಳಿಸುವಂತೆ ಕೋರಿ ಶಿರಸಿಯ ಶ್ರೀ ಮಹಾ ಗಣಪತಿ ಶಂಕರ ದೇವಸ್ಥಾನ ಮತ್ತು ಇತರರು ಅರ್ಜಿ ಸಲ್ಲಿಸಿದ್ದರು.
ಸುಪ್ರೀಂ ಕೋರ್ಟ್ ತಡೆಯಾಜ್ಞೆಯ ಲಾಭ ಪಡೆಯುತ್ತಿರುವ ರಾಜ್ಯ ಸರ್ಕಾರ ಸಂವಿಧಾನದತ್ತ ಧಾರ್ಮಿಕ ಹಕ್ಕುಗಳನ್ನು ಮೊಟಕುಗೊಳಿಸಲು ಹೊರಟಿದೆ ಎಂದು ಅರ್ಜಿದಾರರು ವಾದಿಸಿದರು.
ಹಲವು ದೇವಸ್ಥಾನಗಳ ಸದ್ಯದ ಆಡಳಿತ ಮಂಡಳಿ ಮತ್ತು ಟ್ರಸ್ಟಿಗಳನ್ನು ವಜಾಗೊಳಿಸಿ ಹೊಸ ಸಮಿತಿ ನೇಮಕ ಮಾಡಲು ಧಾರ್ಮಿಕ ಪರಿಷತ್ಗಳು ಸಭೆ ನಡೆಸುತ್ತಿವೆ. ಇದು ತಮ್ಮ ಸಂಪ್ರದಾಯ ಮತ್ತು ಆಚರಣೆಗೆ ವಿರುದ್ಧವಾಗಿವೆ ಎಂದರು. ಆದರೆ, ಈ ವಾದವನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಲಿಲ್ಲ.