ಕೋರಾ: ರೈತರು ಕೇವಲ ಕೃಷಿಗೆ ಜೋತು ಬೀಳದೆ ಹೈನುಗಾರಿಕೆಯನ್ನು ಅಳವಡಿಸಿಕೊಂಡು ಅರ್ಥಿಕವಾಗಿ ಅಭಿವೃದ್ಧಿ ಸಾಧಿಸಬೇಕು ಎಂದು ಕಾನೂನು ಸಚಿವ ಟಿ.ಬಿ ಜಯಚಂದ್ರ ಹೇಳಿದರು.
ಹೋಬಳಿಯ ಚಿಕ್ಕಗುಂಡಕಲ್ಲು ಗ್ರಾಮದಲ್ಲಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ತುಮಕೂರು ಹಾಲು ಒಕ್ಕೂಟದ ವತಿಯಿಂದ ನಡೆದ 13ನೇ ಸುತ್ತಿನ ರಾಷ್ಟ್ರೀಯ ಕಾಲು-ಬಾಯಿ ಜ್ವರ ನಿಯಂತ್ರಣ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಣ್ಣ ರೈತರು ತಮ್ಮ ಹೊಲದಲ್ಲಿಯೇ ಮೇವು ಬೆಳೆದು ಹೈನುಗಾರಿಕೆ ಮಾಡಬೇಕು. ಹೆಚ್ಚು ಹಾಲು ಕರೆಯುವಂತಹ ಹಸುಗಳನ್ನು ಸಾಕಿ ಹಾಲು ಉತ್ಪಾದನೆ ಮಾಡುವ ಮೂಲಕ ಕುಟುಂಬದ ವಾರ್ಷಿಕ ವರಮಾನವನ್ನು ಹೆಚ್ಚಿಸಿಕೊಳ್ಳಬೇಕು’ ಎಂದರು.
‘ಗ್ರಾಮೀಣ ಭಾಗದ ಹೈನುಗಾರರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಹಾಗೆಯೇ ರೈತರು ತಮ್ಮ ರಾಸುಗಳಿಗೆ ಸಕಾಲಕ್ಕೆ ಸರಿಯಾಗಿ ಲಸಿಕೆ ಹಾಕಿಸುವ ಮೂಲಕ ಹೈನುಗಳನ್ನು ಮಾರಕ ರೋಗಗಳಿಂದ ರಕ್ಷಿಸಿಕೊಳ್ಳಬೇಕು’ ಎಂದು ಹೇಳಿದರು.
ಶಾಸಕ ಸುಧಾಕರ್ ಲಾಲ್ ಮಾತನಾಡಿ, 'ಹಳ್ಳಿಗಳಲ್ಲಿ ಹೈನುಗಾರಿಕೆ ಅಭಿವೃದ್ಧಿಯಾಗಬೇಕಾದರೆ ನೀರಾವರಿ ಮೂಲಗಳು ಅಭಿವೃದ್ದಿಯಾಗಬೇಕು. ತಾಲೂಕಿನಲ್ಲಿ ಅಗತ್ಯವಿರುವ ಕಡೆಗಳಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡಬೇಕು’ ಎಂದರು.
ಪಶು ಇಲಾಖೆಯ ಉಪ ನಿರ್ದೇಶಕ ಕೆ.ಜಿ.ಶಿವರುದ್ರಪ್ಪ, ಸಹಾಯಕ ನಿರ್ದೇಶಕ ಸಂಜೀರಾಯ ಇದ್ದರು.