ರಬಕವಿ ಬನಹಟ್ಟಿ: ರಬಕವಿ ಬನಹಟ್ಟಿಯಲ್ಲಿ 62ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ 4,200 ಅಡಿ ಉದ್ದದ ಕನ್ನಡ ಧ್ವಜದ ಮೆರವಣಿಗೆ ಅದ್ಧೂರಿಯಾಗಿ ನಡೆಯಿತುಬನಹಟ್ಟಿಯ ಎಸ್.ಆರ್.ಎ ಕಾಲೇಜಿನಿಂದ ಆರಂಭಗೊಂಡ ಮೆರವಣಿಗೆ ರಬಕವಿಯ ಎಂ.ವಿ.ಪಟ್ಟಣ ಶಾಲೆಯ ಮೈದಾನದಲ್ಲಿ ಮುಕ್ತಾಯಗೊಂಡಿತು. ಒಟ್ಟು ಮೂರೂವರೆ ಗಂಟೆಗಳ ಕಾಲ ಮೆರವಣಿಗೆ ನಡೆಯಿತು.
ರಾಮಪುರದ ಕುರುಹಿನಶೆಟ್ಟಿ ಸಮಾಜದ ಸ್ವಾಮೀಜಿ, ಸಾಹಿತಿ ಜಯವಂತ ಕಾಡದೇವರ, ಎಂ.ಎಸ್.ಬದಾಮಿ, ಪ್ರಾಚಾರ್ಯ ಬಸವರಾಜ ಕೊಣ್ಣೂರ, ಮಲ್ಲಿಕಾರ್ಜುನ ನಾಶಿ, ಡಾ.ರವಿ ಜಮಖಂಡಿ ಧ್ವಜಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ಸಮೀಪದ ಯಲ್ಲಟ್ಟಿಯ ಕೊಣ್ಣೂರ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ರಬಕವಿಯ ಕೊಟ್ರಶೆಟ್ಟಿ ಶಾಲೆಯ ವಿದ್ಯಾರ್ಥಿಗಳು, ಎಸ್.ಆರ್.ಎ ಕಾಲೇಜು ವಿದ್ಯಾರ್ಥಿಗಳು ಮತ್ತು ಸ್ಥಳೀಯ ಸಾವಿರಾರು ಸಾರ್ವಜನಿಕರು ಧ್ವಜವನ್ನು ಹೊತ್ತು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದರು.
ಮಾರ್ಗ ಮಧ್ಯದಲ್ಲಿ ಕನ್ನಡ ಪರ ಘೋಷಣೆಗಳು ಮೊಳಗಿದವು. ಬಹಳಷ್ಟು ಜನರು ಕನ್ನಡ ಧ್ವಜಕ್ಕೆ ಹೂ ಹಾರಿಸಿದರು. ಇನ್ನೂ ಅನೇಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಧ್ವಜ ಹೊತ್ತು ಸಾಗಿದವರಿಗೆ ನೀರು, ಪಾನಕ, ಚಾಕೊಲೆಟ್ ಮತ್ತು ಕಲ್ಲು ಸಕ್ಕರೆಯನ್ನು ಸಾರ್ವಜನಿಕರು ವಿತರಣೆ ಮಾಡಿದರು.
ರಬಕವಿ ಬನಹಟ್ಟಿ ನಗರಸಭೆಯ ಅಧ್ಯಕ್ಷೆ ರಾಮೀಜಾ ಝಾರೆ, ಪೌರಾಯುಕ್ತ ಆರ್.ಎಂ.ಕೊಡುಗೆ, ಸದಸ್ಯರು, ಚಿದಾನಂದ ಸೊಲ್ಲಾಪುರ, ಗಂಗಾಧರ ಉಕ್ಕಲಿ, ಶಾಂತಾ ಮಂಡಿ, ಶಿವಾನಂದ ಬಾಗಲಕೋಟಮಠ, ರಬಕವಿ ಬನಹಟ್ಟಿ ಲಯನ್ಸ್ ಸಂಸ್ಥೆಯ ಅನೇಕ ಸದಸ್ಯರು ಉಪಸ್ಥಿತರಿದ್ದರು.