ಭೋಪಾಲ್: 19 ವರ್ಷದ ವಿದ್ಯಾರ್ಥಿನಿ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಹಾಗೂ ನಗರದ ಪೊಲೀಸ್ ವರಿಷ್ಠಾಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ.
ವಿದ್ಯಾರ್ಥಿನಿ ದೂರು ದಾಖಲಿಸಲು ಹೋದಾಗ ವ್ಯಾಪ್ತಿಯ ಕಾರಣ ನೀಡಿ ಮೂರು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿಕೊಳ್ಳಲು ನಿರಾಕರಿಸಲಾಗಿತ್ತು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಬಳಿಕ ಪೊಲೀಸರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ.
ವಿದ್ಯಾರ್ಥಿನಿ ಮಂಗಳವಾರ ಎಂಪಿ ನಗರದಲ್ಲಿ ಯುಪಿಎಸ್ಸಿ ಪರೀಕ್ಷೆಗಾಗಿ ತರಬೇತಿಯ ಕೇಂದ್ರದಿಂದ ತೆರಳುತ್ತಿದ್ದಾಗ ಹಬೀಬ್ಗಂಜ್ ರೈಲ್ವೆ ಹಳಿಗಳ ಬಳಿ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ವಿದ್ಯಾರ್ಥಿನಿ ಪ್ರತಿದಿನ ಹಬೀಬ್ಗಂಜ್ ರೈಲ್ವೆ ನಿಲ್ದಾಣದಿಂದ ತನ್ನ ಊರಿಗೆ ತೆರಳುತ್ತಿದ್ದರು. ಘಟನೆ ನಡೆದ ದಿನ ಆಕೆ ಸಮೀಪದ ಮಾರ್ಗದಿಂದ ರೈಲ್ವೆ ನಿಲ್ದಾಣಕ್ಕೆ ತೆರಳುತ್ತಿದ್ದರು.
ಈ ಸಂದರ್ಭದಲ್ಲಿ ಆರೋಪಿಗಳು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಬಳಿಕ ವಾಚ್, ಫೋನ್ ಹಾಗೂ ಕಿವಿಯ ಓಲೆಗಳನ್ನು ಕಸಿದುಕೊಂಡು ಆಕೆಯನ್ನು ಬಿಟ್ಟುಕಳುಹಿಸಿದ್ದಾರೆ. ಹಬೀಬ್ಗಂಜ್ ರೈಲ್ವೆ ನಿಲ್ದಾಣಕ್ಕೆ ತೆರಳಿದ ವಿದ್ಯಾರ್ಥಿನಿ ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಮಾರನೆ ದಿನ ತಂದೆಯೊಂದಿಗೆ ದೂರು ನೀಡಲು ತೆರಳಿದಾಗ ವ್ಯಾಪ್ತಿ ಕಾರಣ ನೀಡಿ ಮೂರು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿಕೊಂಡಿರಲಿಲ್ಲ.
ಜಿಆರ್ಪಿ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿನಿ ದೂರು ದಾಖಲಿಸಿದ್ದು, ಎಲ್ಲ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣ ಕುರಿತು ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿದ್ದರಿಂದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಪೊಲೀಸ್ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಕ್ರಮಕ್ಕೆ ಸೂಚಿಸಿದ್ದರು.