ಚೆನ್ನೈ: ಎಡಗೈ ಸ್ಪಿನ್ನರ್ ರಾಹಿಲ್ ಶಾ ಅವರನ್ನು ರಣಜಿ ಟ್ರೋಫಿ ಟೂರ್ನಿಯ ಮಧ್ಯಪ್ರದೇಶ ವಿರುದ್ಧದ ಪಂದ್ಯದಲ್ಲಿ ಆಡುವ ತಮಿಳುನಾಡು ತಂಡದಿಂದ ಕೈಬಿಡಲಾಗಿದೆ. ‘ಸಿ’ ಗುಂಪಿನ ಈ ಪಂದ್ಯ ನವೆಂಬರ್ 17ರಿಂದ ಇಂದೋರ್ನಲ್ಲಿ ನಡೆಯಲಿದೆ.
ಕಟಕ್ನಲ್ಲಿ ನಡೆದ ಕಳೆದ ಪಂದ್ಯದಲ್ಲಿ ಒಡಿಶಾಗೆ ತಮಿಳುನಾಡು ಮೊದಲ ಇನಿಂಗ್ಸ್ ಮುನ್ನಡೆ ಬಿಟ್ಟುಕೊಟ್ಟಿತ್ತು. ಈ ಪಂದ್ಯದಲ್ಲಿ ಆಡಿದ ಎಂ.ಮಹಮ್ಮದ್ ಮತ್ತು ವಿಕೆಟ್ ಕೀಪರ್ ಎಸ್.ಲೋಕೇಶ್ವರ್ ಅವರ ಬದಲಿಗೆ ವಿಕೆಟ್ ಕೀಪರ್ ಆರ್.ರೋಹಿತ್ ಮತ್ತು ವೇಗಿ ಎಲ್.ವಿಘ್ನೇಶ್ ಅವರಿಗೆ ಸ್ಥಾನ ನೀಡಲಾಗಿದೆ.
ಆಯ್ಕೆ ಮಂಡಳಿ ಸೋಮವಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಆಲ್ರೌಂಡರ್ ಜೆ.ಕೌಶಿಕ್ ಅವರಿಗೂ ಸ್ಥಾನ ನೀಡಲಾಗಿದೆ. ಶ್ರೀಲಂಕಾ ಎದುರಿನ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಿರುವ ಮುರಳಿ ವಿಜಯ್ ಅವರನ್ನು ತಮಿಳುನಾಡು ತಂಡ ಮುಂದಿನ ಪಂದ್ಯಗಳಲ್ಲಿ ಕಳೆದುಕೊಳ್ಳಲಿದೆ.
ನಾಲ್ಕು ಪಂದ್ಯಗಳಿಂದ ಎಂಟು ಪಾಯಿಂಟ್ ಕಲೆ ಹಾಕಿರುವ ತಮಿಳುನಾಡು ಗುಂಪು ಹಂತದ ಉಳಿದ ಎರಡೂ ಪಂದ್ಯಗಳನ್ನು ಗೆಲ್ಲಬೇಕಾದ ಒತ್ತಡದಲ್ಲಿದೆ.