ಮಂಗಳೂರು: ಚಾಲ್ತಿ ಖಾತೆ ಮತ್ತು ಉಳಿತಾಯ ಖಾತೆಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕರ್ಣಾಟಕ ಬ್ಯಾಂಕ್ ವಿಶೇಷ ಅಭಿಯಾನವನ್ನು ದೇಶದಾದ್ಯಂತ ಆರಂಭಿಸಿದೆ.
ನಗರದಲ್ಲಿನ ಬ್ಯಾಂಕ್ನ ಪ್ರಧಾನ ಕಚೇರಿಯಲ್ಲಿ ಬುಧವಾರ ಅಭಿಯಾನಕ್ಕೆ ಚಾಲನೆ ನೀಡಿದ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್., ‘ಇದೊಂದು ಬಹುದೊಡ್ಡ ಅಭಿಯಾನವಾಗಿದ್ದು, ಈ ಮೂಲಕ ಕರ್ಣಾಟಕ ಬ್ಯಾಂಕ್ ಗ್ರಾಹಕರ ಮನೆ ಬಾಗಿಲಿಗೆ ಸೇವೆ ನೀಡಲು ಮುಂದಾಗಿದೆ’ ಎಂದರು.
‘ಮೂರೂವರೆ ತಿಂಗಳು ಈ ಅಭಿಯಾನ ನಡೆಯಲಿದ್ದು, ಸುಮಾರು 4.15 ಲಕ್ಷ ಖಾತೆಗಳನ್ನು ತೆರೆಯುವ ಗುರಿ ಹೊಂದಲಾಗಿದೆ. ದೊಡ್ಡ ಸಂಖ್ಯೆಯ ಗ್ರಾಹಕರು ಬ್ಯಾಂಕಿಂಗ್ ವಹಿವಾಟಿನಲ್ಲಿ ಪಾಲ್ಗೊಳ್ಳಲಿ ಎಂಬುದು ನಮ್ಮ ಉದ್ದೇಶವಾಗಿದೆ’ ಎಂದರು.
‘ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿರುವ ಬ್ಯಾಂಕ್, ಗ್ರಾಹಕ ಸ್ನೇಹಿ ಬ್ಯಾಂಕ್ ಕೂಡ ಆಗಿದೆ. ವಿವಿಧ ವರ್ಗದ ಗ್ರಾಹಕರ ಬೇಡಿಕೆಗಳನ್ನು ಗಮನದಲ್ಲಿ ಇಟ್ಟುಕೊಂಡು, ಅದಕ್ಕೆ ತಕ್ಕಂತೆ ಸೇವೆಗಳನ್ನು ಒದಗಿಸಲು ಬದ್ಧವಾಗಿದೆ. ತಂತ್ರಜ್ಞಾನದಿಂದಾಗಿ ಬ್ಯಾಂಕಿಂಗ್ ಸೇವೆ ಸುಲಭವಾಗಿದೆ. ಹೊಸ ಖಾತೆ ಆರಂಭಿಸಲು ಬಯಸುವ ಗ್ರಾಹಕರು ಬ್ಯಾಂಕಿನ ವೆಬ್ಸೈಟ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ’ ಎಂದರು.
‘ಗ್ರಾಹಕರಿಗೆ ನಿರಂತರವಾಗಿ ಸುಲಭ ಬ್ಯಾಂಕಿಂಗ್ ಸೇವೆ ಒದಗಿಸುವ ಉದ್ದೇಶದಿಂದ ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಕೆಬಿಎಲ್ ಭೀಮ್ ಯುಪಿಐ ಆ್ಯಪ್, ಕೆಬಿಎಲ್ ಅಪ್ನಾ ಆ್ಯಪ್, ಎಸ್ಎಂಎಸ್ ಬ್ಯಾಂಕಿಂಗ್, ಡೆಬಿಟ್/ಕ್ರೆಡಿಟ್ ಕಾರ್ಡ್ ಸೇರಿದಂತೆ ಸೇವೆಗಳನ್ನು ನೀಡುತ್ತಿದೆ.
‘ಉಳಿತಾಯ ಖಾತೆ ಹೊಂದಿರುವ ಗ್ರಾಹಕರಿಗೆ ₹100 ಪ್ರೀಮಿಯಂನಲ್ಲಿ ₹ 10 ಲಕ್ಷ ಮೊತ್ತದ ವೈಯಕ್ತಿಕ ಅಪಘಾತ ವಿಮೆ ‘ಕೆಬಿಎಲ್ ಸುರಕ್ಷಾ’ ಅನ್ನು ಬ್ಯಾಂಕ್ ನೀಡುತ್ತಿದೆ’ ಎಂದರು.
‘ಗ್ರಾಹಕರು ಈ ವಿಶೇಷ ಅಭಿಯಾನದ ಪ್ರಯೋಜನ ಪಡೆಯಬೇಕು. ಉತ್ತಮ ಬ್ಯಾಂಕ್ ಸೇವೆಯ ಅನುಭವವನ್ನು ತಮ್ಮದಾಗಿಸಿಕೊಳ್ಳಬೇಕು’ ಎಂದೂ ಮನವಿ ಮಾಡಿದರು.
* ಬುಧವಾರ ಆರಂಭವಾಗಿರುವ ಈ ಅಭಿಯಾನ, ಫೆಬ್ರುವರಿ 28ರವರೆಗೆ ನಡೆಯಲಿದೆ. 774 ಶಾಖೆಗಳ 8 ಸಾವಿರಕ್ಕೂ ಅಧಿಕ ಸಿಬ್ಬಂದಿ, ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
–ಮಹಾಬಲೇಶ್ವರ ಎಂ.ಎಸ್., ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ, ಸಿಇಒ