ಬೆಂಗಳೂರು: ವಿಶ್ವ ಮಧುಮೇಹ ದಿನದ ಅಂಗವಾಗಿ ಬ್ಯಾಟರಾಯನಪುರ ಕ್ಷೇತ್ರವ್ಯಾಪ್ತಿಯ ಸಹಕಾರ ನಗರದ ಲೈಫ್ಕೇರ್ ಕ್ಲಿನಿಕ್ ಮತ್ತು ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಮಾರುತಿ ನಗರದ ಸರ್ಕಾರಿ ಶಾಲೆಯ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಮಧುಮೇಹ ಮತ್ತು ಸ್ಥೂಲಕಾಯ ತಪಾಸಣಾ ಶಿಬಿರ ಹಾಗೂ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕ್ಲಿನಿಕ್ನಿಂದ ಶಾಲೆಯವರೆಗೆ ನಡೆದ ಮಧುಮೇಹ ಕಾಯಿಲೆ ಕುರಿತ ಜಾಗೃತಿ ಜಾಥಾದಲ್ಲಿ ಮಕ್ಕಳು, ಮಹಿಳೆಯರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಪಾಲ್ಗೊಗೊಂಡಿದ್ದರು.
ಮಧುಮೇಹದ ಲಕ್ಷಣಗಳು, ತಡೆಗಟ್ಟುವ ವಿಧಾನ, ವ್ಯಾಯಾಮ, ಆಹಾರಪಥ್ಯ ಕುರಿತ ಮಾಹಿತಿಯ ಕಿರು ಹೊತ್ತಿಗೆಗಳನ್ನು ಮಹಿಳೆಯರಿಗೆ ವಿತರಿಸಲಾಯಿತು.
ಉಪನ್ಯಾಸ ನೀಡಿದ ಮಧುಮೇಹ ತಜ್ಞ ಡಾ.ಎಲ್.ಶ್ರೀನಿವಾಸಮೂರ್ತಿ, ಬಾಲ್ಯದಲ್ಲಿ ಬೊಜ್ಜಿನ ಸಮಸ್ಯೆಯಿದ್ದರೆ ಭವಿಷ್ಯದಲ್ಲಿ ಮಧುಮೇಹ ಕಾಯಿಲೆಗೆ ಒಳಗಾಗಬೇಕಾಗುತ್ತದೆ. ಮಕ್ಕಳು ಎಚ್ಚೆತ್ತುಕೊಂಡು ಚಿಕ್ಕಂದಿನಿಂದಲೇ ವ್ಯಾಯಾಮ ಮತ್ತು ನಿಯಮಿತ ಆಹಾರ ಸೇವನೆ ಮಾಡಿದರೆ ಆರೋಗ್ಯದ ಜೀವನ ನಡೆಸಬಹುದು’ ಎಂದರು.
ಮಧುಮೇಹಕ್ಕೆ ತುತ್ತಾಗುತ್ತಿರುವ ಪ್ರತಿ 5 ಮಹಿಳೆಯರಲ್ಲಿ ಇಬ್ಬರು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಇಂತಹ ಮಹಿಳೆಯರಲ್ಲಿ ಬೊಜ್ಜಿನ ಮತ್ತು ಬಂಜೆತನದ ಸಮಸ್ಯೆ ಸಾಮಾನ್ಯವಾಗಿರುತ್ತದೆ ಎಂದರು.
ಬಹಳಷ್ಟು ಜನರಿಗೆ ಕಾಯಿಲೆಯ ಲಕ್ಷಣಗಳ ಬಗ್ಗೆ ತಿಳಿದಿರುವುದಿಲ್ಲ. ಮಕ್ಕಳಿಗೆ ಈ ಬಗ್ಗೆ ಅರಿವು ಮೂಡಿಸಿದರೆ, ಅವರ ಕುಟುಂಬ ಸದಸ್ಯರಲ್ಲಿ ಮಧುಮೇಹ ಕಾಯಿಲೆ ಇದ್ದರೆ ತಪಾಸಣೆಗೆ ಕಳುಹಿಸಲು ನೆರವಾಗುತ್ತದೆ ಎಂದರು.