ಕಡೂರು: ಕಡೂರು, ಬೀರೂರು ಮತ್ತು ಅಜ್ಜಂಪುರ ಉಪ ವಿಭಾಗಗಳ ವ್ಯಾಪ್ತಿಯ ಗ್ರಾಮಗಳಿಗೆ ನಿರಂತರ ವಿದ್ಯುತ್ ಸರಬರಾಜು ಮಾಡುವ ಯೋಜನೆಗೆ ಕೇಂದ್ರ ಸರ್ಕಾರ ₹140 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದು ಶಾಸಕ ವೈ.ಎಸ್.ವಿ. ದತ್ತ ಹೇಳಿದರು.
ಕಡೂರಿನಲ್ಲಿ ಶನಿವಾರ ಸುದ್ದಿ ಗಾರರೊಂದಿಗೆ ಅವರು ಮಾತನಾಡಿ, ಕೇಂದ್ರ ಸರ್ಕಾರದ ಪಂಡಿತ್ ದೀನ್ ದಯಾಳ್ ಗ್ರಾಮ ಜ್ಯೋತಿ ಯೋಜನೆಯಲ್ಲಿ 3 ಉಪ ವಿಭಾಗಗಳ ಫೀಡರ್ಸ್ ಅಗ್ರಿಸೇಷನ್ ಕಾಮಗಾರಿಗಾಗಿ ₹140 ಕೋಟಿ ಬಿಡುಗಡೆ ಮಾಡಿದ್ದು, ಈಗಾಗಲೇ ಅಗತ್ಯವಿರುವ ಪರಿಕರ ಗಳನ್ನು ಸರಬರಾಜು ಮಾಡಲಾಗುತ್ತಿದೆ. ಈ ಅನುದಾನದ ಪೈಕಿ ಸುಮಾರು ₹100 ಕೋಟಿ ಕೇವಲ ಕಡೂರು ಕ್ಷೇತ್ರದಲ್ಲಿಯೇ ವಿನಿಯೋಗವಾ ಗಲಿದ್ದು, ತಾಲ್ಲೂಕಿನ ಬಹುತೇಕ ಹಳ್ಳಿಗಳು 24 ಗಂಟೆ ವಿದ್ಯುತ್ ಪಡೆಯಲಿವೆ’ ಎಂದರು.
‘ಈ ಯೋಜನೆಗೆ ಏಷಿಯನ್ ಫ್ಯಾಬ್ಟೆಕ್ ಪ್ರೈವೇಟ್ ಕಂಪೆನಿ ಟೆಂಡರ್ ಪಡೆದಿದ್ದು, ಕ್ಷೇತ್ರದ ಮಟ್ಟಿಗೆ ಇದು ಬಹುದೊಡ್ಡ ಸಾಧನೆ. ಇದಕ್ಕಾಗಿ ಕೇಂದ್ರ ಸರ್ಕಾರವನ್ನು ಅಭಿನಂದಿಸುತ್ತೇನೆ ಎಂದ ಅವರು ಇಷ್ಟು ಅನುದಾನ ಕಡೂರಿಗೆ ಬರಲು ಸಂಸದ ದೇವೇಗೌಡರ ಮಾರ್ಗದರ್ಶನ ಮತ್ತು ನನ್ನ ಶ್ರಮವಿದೆ. ಈಗಾಗಲೇ ಕಾಮಗಾರಿಯ ಪರಿಕರಗಳನ್ನು ಗ್ರಾಮ ಗಳಿಗೆ ಸರಬರಾಜು ಮಾಡುವ ಕಾರ್ಯ ಆರಂಭವಾಗಿದ್ದು ಅಧಿವೇಶನದ ನಂತರ ಸಾಂಕೇತಿಕ ಪೂಜೆ ನಡೆಸಲಾಗುವುದು’ ಎಂದರು.
ಕೇಂದ್ರದ ಕುಟೀರಜ್ಯೋತಿ ಯೋಜನೆಯಲ್ಲಿ ಕಡೂರು ವ್ಯಾಪ್ತಿಯ 3,587 ಬಿಪಿಎಲ್ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ₹12.55 ಕೋಟಿ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಕಡೂರು ಮತ್ತು ಬೀರೂರಿನಲ್ಲಿರುವ ಟ್ರಾನ್ಸ್ ಫಾರ್ಮರ್ ಕ್ಲಿನಿಕ್ನಲ್ಲಿ ಹೆಚ್ಚುವರಿ ಪರಿವರ್ತಕಗಳ ಅಳವಡಿಕೆ ಹಾಗೂ ಹೊಸ 11 ಕೆವಿ ಮಾರ್ಗಗಳ ರಚನೆಗೆ ರಾಜ್ಯ ಸರ್ಕಾರದಿಂದ ₹6.72 ಲಕ್ಷ ಬಿಡುಗಡೆಯಾಗಿದ್ದು, ಸೌರಶಕ್ತಿ ಬಳಕೆಯ ಸಾಧ್ಯ ಸಾಧ್ಯತೆಗಳನ್ನು ಕಂಡುಕೊಳ್ಳಲು ಪ್ರಾಯೋಗಿಕವಾಗಿ ಕಡೂರಿನ ತಾಲ್ಲೂಕು ಪಂಚಾಯಿತಿ ಕಚೇರಿ ಮತ್ತು ಪೊಲೀಸ್ ಠಾಣೆಯ ಮೇಲೆ ಸೌರ ಫಲಕಗಳನ್ನು ಅಳವಡಿಸಿಲು ₹1.82 ಲಕ್ಷ ಬಿಡುಗಡೆಯಾಗಿದೆ. ಇದಲ್ಲದೆ ಕ್ಷೇತ್ರದಲ್ಲಿ 6 ಮಾದರಿ ವಿದ್ಯುತ್ ಗ್ರಾಮಗಳಿಗಾಗಿ ₹2.40 ಲಕ್ಷ ಬಿಡುಗಡೆಯಾಗಿದ್ದು ಶೀಘ್ರದಲ್ಲೇ 6 ಗ್ರಾಮಗಳನ್ನು ಆಯ್ಕೆ ಮಾಡಲಿದ್ದೇವೆ ಎಂದರು.
ಜೆಡಿಎಸ್ ಕಾರ್ಯಾಧ್ಯಕ್ಷ ಭಂಡಾರಿಶ್ರೀನಿವಾಸ್, ಅಧ್ಯಕ್ಷ ಕೋಡಿಹಳ್ಳಿ ಮಹೇಶ್, ಉಪಾಧ್ಯಕ್ಷ ಜಿಗಣೇಹಳ್ಳಿ ನೀ ಲಕಂಠಪ್ಪ, ಎಂ.ಕೆ. ಮಹೇಶ್ವರಪ್ಪ, ಶೂದ್ರಶ್ರೀನಿವಾಸ್, ಕಂಸಾಗರಶೇಖರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.