ನಾಪೋಕ್ಲು: ಚೇಲಾವರ ಗ್ರಾಮದಲ್ಲಿ ಒಂದು ಮರಿಯಾನೆ ಸೇರಿದಂತೆ ಮೂರು ಕಾಡಾನೆಗಳು ಹಗಲು- ರಾತ್ರಿ ಭತ್ತದ ಗದ್ದೆ, ಕಾಫಿ ತೋಟ, ಮುಖ್ಯರಸ್ತೆಗಳಲ್ಲಿ ಸಂಚರಿಸುತ್ತಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಪ್ರತಿದಿನ ರಸ್ತೆಗಳಲ್ಲಿ, ತೋಟಗಳಲ್ಲಿ ಕಾಡಾನೆಗಳು ಓಡಾಡುತ್ತಿರುವುದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು, ತೋಟದ ಕಾರ್ಮಿಕರು, ಸಾರ್ವಜನಿಕರು ಭಯದಿಂದ ರಸ್ತೆಯಲ್ಲಿ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
‘ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸಿಬ್ಬಂದಿ ಆನೆಗಳನ್ನು ಕಾಡಿಗಟ್ಟಲು ಅಸಹಾಯಕತೆ ಪ್ರದರ್ಶಿಸುತ್ತಿದ್ದಾರೆ. ಕಳೆದ ವರ್ಷದ ಆನೆ ನಷ್ಟ ಪರಿಹಾರ ಫಲಾನುಭವಿಗಳಿಗೆ ಇನ್ನೂ ದೊರೆತಿಲ್ಲ. ಬೆಳೆ ನಷ್ಟದ ಬಗ್ಗೆ ಮಹಜರು ನಡೆಸಿ ಸ್ಥಳದಲ್ಲಿಯೇ ಪರಿಹಾರ ನೀಡಲು ಕ್ರಮಕೈಗೊಳ್ಳಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.