ಮೈಸೂರು: ಕಬ್ಬು ಬೆಳೆಗೆ ವೈಜ್ಞಾನಿಕ ದರ ನಿಗದಿಗೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸುತ್ತಿದ್ದ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನವೊಲಿಕೆಯ ಬಳಿಕ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ.
ಟಿ.ಕೆ.ಬಡಾವಣೆಯ ನಿವಾಸಕ್ಕೆ ರೈತರನ್ನು ಕರೆಸಿಕೊಂಡು ಮಾತುಕತೆ ನಡೆಸಿದ ಸಿದ್ದರಾಮಯ್ಯ, ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ರೈತರು ಹಾಗೂ ಸಕ್ಕರೆ ಕಾರ್ಖಾನೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸುವಂತೆ ಜಿಲ್ಲಾಧಿಕಾರಿ ಡಿ.ರಂದೀಪ್ ಅವರಿಗೆ ಸೂಚಿಸಿದರು ಎಂದು ಪ್ರತಿಭಟನಾ ಕಾರರು ತಿಳಿಸಿದರು.
‘ಪ್ರತಿ ಟನ್ ಕಬ್ಬಿಗೆ ಸರ್ಕಾರ ₹ 2,550 ನಿಗದಿ ಮಾಡಿದೆ. ಹೆಚ್ಚುವರಿ ಯಾಗಿ ₹ 250 ನೀಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ಉಪ ಉತ್ಪನ್ನಗಳಿಗೆ ಪ್ರತಿ ಟನ್ನಿಗೆ ₹ 60 ನೀಡುವಂತೆ ಕಾರ್ಖಾನೆ ಗಳಿಗೆ ನಿರ್ದೇಶನ ನೀಡುವುದಾಗಿ ಮುಖ್ಯಮಂತ್ರಿ ಆಶ್ವಾಸನೆ ನೀಡಿದ್ದಾರೆ’ ಎಂದು ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಹೇಳಿದರು.
‘ಕಬ್ಬು ತೂಕದಲ್ಲಿ ನಡೆಯುತ್ತಿದ್ದ ವಂಚನೆ ತಪ್ಪಿಸಲು ಯಂತ್ರವೊಂದನ್ನು ಅಳವಡಿಸಲು ಹಾಗೂ ಇಳುವರಿ ಪತ್ತೆಗೆ ತಾಂತ್ರಿಕ ಸಮಿತಿ ರಚಿಸಲು ಸಿದ್ದರಾಮಯ್ಯ ಒಲವು ತೋರಿದ್ದಾರೆ’ ಎಂದು ಮಾಹಿತಿ ನೀಡಿದರು. ಹಳ್ಳಿಕೆರೆಹುಂಡಿ ಭಾಗ್ಯರಾಜ್, ಕಿರಗ ಸೂರು ಶಂಕರ್, ಹಾಡ್ಯ ರವಿ ಇದ್ದರು.