ವಿಜಯಪುರ: ರಾಜ್ಯದಲ್ಲಿ ಎಚ್ಐವಿ ಸೋಂಕಿಗೆ ತುತ್ತಾಗುವ ಹೊಸಬರ ಸಂಖ್ಯೆ ಹಾಗೂ ಸಾವಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ಎಚ್ಐವಿ ಬಾಧಿತರಲ್ಲಿ ಭರವಸೆಯ ಹೊಂಬೆಳಕು ಮೂಡಿದೆ. ಮೂರು ವರ್ಷಗಳ ಹಿಂದೆ ದೇಶದಲ್ಲಿ ಹೆಚ್ಚು ಎಚ್ಐವಿ ಸೋಂಕಿತರನ್ನು ಹೊಂದಿರುವ ರಾಜ್ಯಗಳ ಪೈಕಿ ಐದನೇ ಸ್ಥಾನದಲ್ಲಿದ್ದ ಕರ್ನಾಟಕ ಇದೀಗ ಎಂಟನೇ ಸ್ಥಾನಕ್ಕೆ ಕುಸಿದಿದೆ.
‘ವರ್ಷದಿಂದ ವರ್ಷಕ್ಕೆ ತಪಾಸಣೆಗೆ ಒಳಗಾಗುವ ಜನ ಸಾಮಾನ್ಯರು, ಗರ್ಭಿಣಿಯರ ಸಂಖ್ಯೆ ಹಲವು ಪಟ್ಟು ಹೆಚ್ಚಾಗಿದೆ. ಆದರೆ, ಹೊಸದಾಗಿ ಸೋಂಕು ತಗುಲಿಸಿಕೊಂಡವರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಕಡಿಮೆ ಆಗಿದೆ’ ಎಂದು ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ (ಕೆಸಾಪ್ಸ್) ಐ.ಇ.ಸಿ ಜಂಟಿ ನಿರ್ದೇಶಕ ಟಿ.ಗೋವಿಂದರಾಜು ‘ಪ್ರಜಾವಾಣಿ’ಗೆ ತಿಳಿಸಿದರು.
‘1998ರಿಂದ ರಾಜ್ಯದಲ್ಲಿ ಎಚ್ಐವಿ ಕಣ್ಗಾವಲು ಸಮಿತಿ ಕ್ರಿಯಾಶೀಲವಾಗಿದೆ. 2011ರಿಂದ 2015ರವರೆಗೆ ಎಚ್ಐವಿ ಸೋಂಕು ಹಾಗೂ ಏಡ್ಸ್ ರೋಗಿಗಳ ಸಾವನ್ನು ಶೂನ್ಯಕ್ಕಿಳಿಸಲು ಕೆಸಾಪ್ಸ್ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರ ಪರಿಣಾಮ ಇಷ್ಟೆಲ್ಲ ಅನುಕೂಲ ಆಗಿದೆ’ ಎಂದು ಅವರು ವಿವರಿಸುತ್ತಾರೆ.
‘ರಾಜ್ಯದಲ್ಲಿ 545 ಸಮಗ್ರ ಆಪ್ತ ಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರಗಳು (ಐಸಿಟಿಸಿ) ಇವೆ. 64 ಎಆರ್ಟಿ, 196 ಲಿಂಕ್ ಎಆರ್ಟಿ ಕೇಂದ್ರಗಳ ಮೂಲಕ 3,10,562 ಸೋಂಕಿತರು ನೋಂದಣಿ ಮಾಡಿಸಿಕೊಂಡಿದ್ದಾರೆ. 2,06,913 ಸೋಂಕಿತರು ಚಿಕಿತ್ಸೆ ಪಡೆದಿದ್ದಾರೆ.
ಇವರಲ್ಲಿ 1,48,545 ಸೋಂಕಿತರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 3,730 ಮಂದಿ ಎರಡನೇ ಹಂತದ ಚಿಕಿತ್ಸೆ, 94 ಎಚ್ಐವಿ ಸೋಂಕಿತರು ಮೂರನೇ ಹಂತದ ಚಿಕಿತ್ಸೆ ಪಡೆಯುತ್ತಿದ್ದಾರೆ. 2017ರ ಸೆಪ್ಟೆಂಬರ್ ಅಂತ್ಯದವರೆಗೂ 59,638 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.