ಧಾರವಾಡ: ‘ಕನ್ನಡ ಭಾಷೆಯನ್ನು ಶಬ್ದಕೋಶದ ಮೂಲಕ ಜಾಗತಿಕ ಮಟ್ಟಕ್ಕೆ ಪರಿಚಯಿಸಿದ ಧೀಮಂತ ವ್ಯಕ್ತಿ ರೆವರೆಂಡ್ ಜಾರ್ಜ್ ಫರ್ಡಿನೆಂಡ್ ಕಿಟೆಲ್’ ಎಂದು ಕವಿವಿ ಕನ್ನಡ ಅಧ್ಯಯನ ಪೀಠದ ಸಹಾಯಕ ಪ್ರಾಧ್ಯಾಪಕ ಡಾ. ವೆಂಕಟಗಿರಿ ದಳವಾಯಿ ಅಭಿಪ್ರಾಯಪಟ್ಟರು.
ಇಲ್ಲಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ಕಿಟೆಲ್ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಏರ್ಪಡಿಸಿದ್ದ ಮಲ್ಲಮ್ಮ ಗದಿಗೆಪ್ಪ ಮೂಲಿಮನಿ ದತ್ತಿ ಕಾರ್ಯಕ್ರಮದಲ್ಲಿ ’ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿ’ ಕುರಿತು ಅವರು ಮಾತನಾಡಿದರು.
‘ಕಿಟೆಲ್ ಶಬ್ದಕೋಶವನ್ನು ಕಾದಂಬರಿಯಾಗಿ, ಕಾವ್ಯವಾಗಿ ಓದುತ್ತಿದ್ದ ವರಕವಿ ಬೇಂದ್ರೆ ಕನ್ನಡದ ರಸವನ್ನು ಕಾವ್ಯದ ಮೂಲಕ ಉಣಬಡಿಸಿದರು. ಕುವೆಂಪು ಅವರಂಥ ಕವಿಗಳು ಆಂಗ್ಲ ಭಾಷೆಯ ಮೋಹವನ್ನು ತೊಡೆದು ಹಾಕಿ ಮಾತೃ ಭಾಷೆ ಕನ್ನಡಕ್ಕೆ ಒತ್ತು ನೀಡಿ ರಾಮಾಯಣದರ್ಶನಂ ಕೃತಿಯ ಮೂಲಕ ಕನ್ನಡಕ್ಕೆ ತಮ್ಮದೇ ಆದ ಕೊಡುಗೆ ನೀಡಿದರು’ ಎಂದರು.
ಡಾ. ಎಂ.ಪಿ. ಮೂಲಿಮನಿ ಮಾತನಾಡಿ ’ನಮ್ಮ ನಾಡು, ನುಡಿ, ಭಾಷೆ ಕುರಿತು ಮಕ್ಕಳಲ್ಲಿ ಅಭಿಮಾನ ಮೂಡುವ ವಾತಾವರಣ ನಿರ್ಮಾಣ ಮಾಡಬೇಕಿದೆ. ಮಕ್ಕಳೂ ಕರ್ನಾಟಕದ ಸಂಸ್ಕೃತಿ, ನಾಡು, ನುಡಿ ಬೆಳವಣಿಗೆಯ ಬಗ್ಗೆ ಚಿಂತನೆ ಮಾಡಿ ತಮ್ಮದೆ ಆದ ಕೊಡುಗೆ ನೀಡಬೇಕು' ಎಂದು ಹೇಳಿದರು.
ದತ್ತಿದಾನಿ ಡಾ. ಗಂಗೂ ಆರ್. ಮೂಲಿಮನಿ, ಪ್ರೊ.ಡ್ಯಾನಿಯಲ್ ಪ್ರವೀಣಕುಮಾರ, ಎಸ್.ಎಸ್. ದೊಡಮನಿ, ಎಫ್.ಬಿ. ಕಣವಿ, ಕೆ.ಎಸ್. ಕೌಜಲಗಿ, ಮಮತಾ ಕುಲಕರ್ಣಿ ಹಾಜರಿದ್ದರು.