ಚಿತ್ರದುರ್ಗ / ನಾಯಕನಹಟ್ಟಿ: ಮೂರು ದಿನಗಳಿಂದ ಮೊಳಕಾಲ್ಮೂರು ತಾಲ್ಲೂಕು ಆಂಧ್ರದ ಗಡಿಭಾಗಗಳಲ್ಲಿ ಸುತ್ತಾಡುತ್ತಿದ್ದ ಎರಡು ಆನೆಗಳು ಮಂಗಳವಾರ ಬೆಳಿಗ್ಗೆ ನಾಯಕನಹಟ್ಟಿ ಸಮೀಪದ ತಳಕು ವ್ಯಾಪ್ತಿಯ ತಿಮ್ಮಪ್ಪಯ್ಯನಹಳ್ಳಿಯಲ್ಲಿ ಪ್ರತ್ಯಕ್ಷವಾಗಿವೆ.
ಬಳ್ಳಾರಿ ಜಾಲಿಮುಳ್ಳಿನ ಗಿಡಗಳ ಪೊದೆಗಳಲ್ಲಿ ಅಡ್ಡಾಡುತ್ತಾ ಜಮೀನುಗಳಲ್ಲಿ ಬೀಡುಬಿಟ್ಟಿವೆ. ಗ್ರಾಮಗಳ ಸಮೀಪದಲ್ಲಿ ಆನೆಗಳು ಸುತ್ತಾಡುತ್ತಾ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿವೆ.
ಆನೆಗಳನ್ನು ನೋಡಲು ಸಾವಿರಾರು ಜನರು ಜಮಾಯಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಆನೆಗಳನ್ನು ಬಂದ ದಾರಿಯಲ್ಲೇ ವಾಪಸ್ ಕಳುಹಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.
ಜನರನ್ನು ನಿಯಂತ್ರಿಸಲು ಅರಣ್ಯ ಇಲಾಖೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಹಾಯ ಪಡೆದಿದ್ದು, ಸದ್ಯ ಡಿಎಆರ್ನ ಒಂದು ತುಕಡಿ ತಿಮ್ಮಪ್ಪಯ್ಯನಹಳ್ಳಿಯಲ್ಲಿಗೆ ಧಾವಿಸಿದೆ.
‘ಆನೆಗಳನ್ನು ಓಡಿಸುವ ಪ್ರಯತ್ನಕ್ಕೆ ಜನರ ನಡವಳಿಕೆ ಅಡ್ಡಿಯಾಗುತ್ತಿದೆ. ಕೂಗಾಟ, ಕಿರುಚಾಟದಿಂದ ಆನೆಗಳು ದಿಕ್ಕುತಪ್ಪುತ್ತಿವೆ. ಆನೆಗಳು ಎಲ್ಲಿ ನಮ್ಮ ಗ್ರಾಮಕ್ಕೆ ನುಗ್ಗುತ್ತವೆಯೋ ಎಂಬ ಭಯದಿಂದ ಜನ ಹೀಗೆ ಮಾಡುತ್ತಿದ್ದಾರೆ. ಗ್ರಾಮಸ್ಥರು ಸಂಯಮದಿಂದ ವರ್ತಿಸಿದರೆ ಆನೆಗಳನ್ನು ವಾಪಸ್ ಕಳುಹಿಸಲು ಸಹಾಯವಾಗುತ್ತದೆ’ ಎಂದು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಬಿ.ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.