ಹಾರ್ದಾ: ಪಾವತಿಸದೆ ಉಳಿಸಿಕೊಂಡಿರುವ ₹ 9 ಸಾವಿರ ವಿದ್ಯುತ್ ಬಾಕಿಯನ್ನು ಕಟ್ಟುವಂತೆ ಸೂಚಿಸಲಾಗಿದ್ದ ನೋಟಿಸ್ ಪಡೆದ ನಂತರ ಇಲ್ಲಿನ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಬೆಳಿಗ್ಗೆ ಅಬ್ಗಾನ್ ಕಾಲಾ ಹಳ್ಳಿಯ ಬಾವಿಯೊಂದರಲ್ಲಿ ತೇಲುತ್ತಿದ್ದ ಶವವನ್ನು, ರೈತ ದಿನೇಶ್ ಪಾಂಡೆ(60) ಅವರದ್ದು ಎಂದು ಗುರುತಿಸಲಾಗಿದೆ ಎಂದು ಇಲ್ಲಿನ ಎಸ್ಪಿ ರಾಜೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಸದ್ಯ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ತನಿಖೆ ಸಂಪೂರ್ಣವಾದ ಬಳಿಕ ಆತ್ಮಹತ್ಯೆಯ ನಿಖರ ಕಾರಣವೇನು ಎಂಬುದು ತಿಳಿದು ಬರಲಿದೆ ಎಂದು ಅವರು ಹೇಳಿದ್ದಾರೆ.
‘ಸ್ಥಳೀಯ ನ್ಯಾಯಾಲಯ ತಮ್ಮ ತಂದೆಗೆ ಮೂರು ದಿನಗಳ ಹಿಂದೆ ಪೊಲೀಸರ ಮೂಲಕ ನೋಟಿಸ್ ನೀಡಿತ್ತು. ಅದರಲ್ಲಿ ₹ 9,111 ವಿದ್ಯುತ್ ಬಾಕಿ ಹಣವನ್ನು ಪಾವತಿಸುವಂತೆ ಸೂಚಿಸಲಾಗಿತ್ತು’ ಎಂದು ಮೃತ ರೈತನ ಮಗ ಸಂಜಯ್ ಪಾಂಡೆ ಹೇಳಿಕೆ ನೀಡಿದ್ದಾರೆ.
ನೋಟಿಸ್ ಪಡೆದಾಗಿನಿಂದ ದಿನೇಶ್ ಪಾಂಡೆ ಒತ್ತಡಕ್ಕೊಳಗಾಗಿದ್ದರು ಹಾಗೂ ಭಾನುವಾರ ಮಧ್ಯಾಹ್ನದಿಂದಲೇ ನಾಪತ್ತೆಯಾಗಿದ್ದರು ಎಂದೂ ಸಂಜಯ್ ಹೇಳಿಕೆ ನೀಡಿದ್ದಾರೆ.