ಕಾಳಗಿ: ಪಶುಪಾಲನಾ ಇಲಾಖೆ ಹಾಗೂ ಕುರಿ ನಿಗಮ, ಬೆಂಗಳೂರು-ಇವರ ಆಶ್ರಯದಲ್ಲಿ ಪಟ್ಟಣದಲ್ಲಿ ಗುರುವಾರ ‘ಸಾಮೂಹಿಕ ಜಂತು ನಿವಾರಣಾ ಲಸಿಕೆ ಹಾಕಲಾಯಿತು. 1,600ಆಡು, 189ಕುರಿಗಳಿಗೆ ಜಂತುನಾಶಕ ಔಷಧಿಯನ್ನು ಹಾಕ ಲಾಯಿತು. ನಿಶಕ್ತ 38ಕುರಿಗಳಿಗೆ ಮತ್ತು 63ಆಡುಗಳಿಗೆ ಚಿಕಿತ್ಸೆ ನೀಡಲಾಯಿತು. ಕುರಿ, ಆಡುಗಳ ಮಾಲೀಕರಿಗೆ ರಕ್ತ ವರ್ಧಕ ಔಷಧಿ ವಿತರಿಸಲಾಯಿತು.
‘ಜಂತುಹುಳು ರಕ್ತ ಮತ್ತು ಆಹಾರದ ಮೇಲೆ ಅವಲಂಬಿ ತವಾದ್ದರಿಂದ ಆಡುಗಳ ಬೆಳವಣಿಗೆ ಕುಂಠಿತವಾಗುತ್ತದೆ. ಗರ್ಭ ಧರಿಸಿದ ರಾಸುಗಳಲ್ಲಿ ಮರಿಗಳ ಬೆಳವಣಿಗೆ ಆಗುವುದಿಲ್ಲ. ಕುರಿ, ಆಡುಗಳು ತೂಕ ಹೊಂದುವುದಿಲ್ಲ. ರಕ್ತಹೀನತೆ, ಭೇದಿ, ಚರ್ಮರೋಗಗಳು ಉಲ್ಭಣವಾಗುತ್ತವೆ. ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಬೇಗನೆ ರೋಗಗಳಿಗೆ ತುತ್ತಾಗುತ್ತವೆ. ಮರಿಗಳು ಮರಣ ಹೊಂದುತ್ತವೆ. ಆದ್ದರಿಂದ 3–4 ತಿಂಗಳಿಗೊಮ್ಮೆ ಜಂತುನಾಶಕ ಔಷಧಿ ಕುಡಿಸುವುದು ಅವಶ್ಯಕ’ ಎಂದು ಪಶು ವೈದ್ಯಾಧಿಕಾರಿ ಡಾ.ಅಣ್ಣರಾವ ಪಾಟೀಲ ಹೇಳಿದರು.
ಈ ಭಾಗದ ಕುರಿ ಹಾಗೂ ಆಡು ಸಾಕಾಣಿಕೆ ರೈತರು ಸಂಘಟಿತರಾಗಿ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ ಸ್ಥಾಪಿಸಲು ಕರೆ ನೀಡಿದ ಅವರು, ನಿಗಮದಿಂದ ಸಂಘಗಳಿಗೆ ಸಿಗುವ ಲಾಭದ ಕುರಿತು ಮಾಹಿತಿ ನೀಡಿದರು.
ಗ್ರಾ.ಪಂ ಉಪಾಧ್ಯಕ್ಷ ದೇವಜಿ ಜಾಧವ್, ಸದಸ್ಯ ಕಾಳಶೆಟ್ಟಿ ಪಡಶೆಟ್ಟಿ ಔಷಧಿ ನೀಡಿಕೆಗೆ ಚಾಲನೆ ನೀಡಿದರು. ರೈತ ಕಸನು ಚವಾಣ್, ಜಗು ರಾಠೋಡ, ಅಶೋಕ ಚವಾಣ್, ಗೋರಾಮ ನಾಯಕ್, ಶಾಮರಾವ ಬೇಲೂರ, ಹಣಮಂತರಾವ ನಂದಿಕೂರ, ಗಂಗಾರಾಮ, ಜಾನುವಾರು ಅಧಿಕಾರಿ ಮನೋಹರ ಕುಲಕರ್ಣಿ, ತಿಪ್ಪಣ್ಣ, ಅಭಿಷೇಕ ಇದ್ದರು.