ಬೈಲಹೊಂಗಲ: ‘ಗಡಿ ಜಿಲ್ಲೆ ಬೆಳಗಾವಿಯನ್ನು ವಿಭಜನೆ ಮಾಡಬಾರದು. ಅನಿವಾರ್ಯವಾಗಿ ಮಾಡಲೇಬೇಕಾದರೆ ಬೈಲಹೊಂಗಲ ಕೇಂದ್ರವಾಗಿಟ್ಟುಕೊಂಡು ಜಿಲ್ಲಾ ರಚನೆ ಮಾಡಬೇಕು’ ಎಂದು ಒತ್ತಾಯಿಸಿ ಬೈಲಹೊಂಗಲ ಜಿಲ್ಲಾ ಹೋರಾಟ ಸಮಿತಿ ಬುಧವಾರ ಕರೆ ನೀಡಿದ್ದ ತಾಲ್ಲೂಕು ಬಂದ್ ಸಂಪೂರ್ಣ ಬಂದ್ ಆಗಿತ್ತು.
ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿದ ವರ್ತಕರು ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಬಸ್, ಟ್ರಕ್, ಲಾರಿ, ಖಾಸಗಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಶಾಲೆ, ಕಾಲೇಜು , ಚಿತ್ರಮಂದಿರಗಳು, ಪೆಟ್ರೋಲ್ ಬಂಕ್ಗಳು, ಬ್ಯಾಂಕ್ಗಳು ಮುಚ್ಚಿದ್ದವು. ಬಸ್ ನಿಲ್ದಾಣ ಜನರಿಲ್ಲದೆ ಬಿಕೋ ಎನ್ನುತ್ತಿತ್ತು. ರಸ್ತೆಗಳು ಖಾಲಿ ಖಾಲಿಯಾಗಿದ್ದವು. ಪರಸ್ಥಳಕ್ಕೆ ತೆರಳಬೇಕಾದ ಪ್ರಯಾಣಿಕರು ಪರದಾಡಿದರು.
ಶಾಖಾ ಮೂರು ಸಾವಿರಮಠದಲ್ಲಿ ಸಭೆ ಸೇರಿದ ಮುಖಂಡರು, ಸಾರ್ವಜನಿಕರು, ‘ಅಖಂಡ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಬಾರದು. ವಿಭಜನೆ ಮಾಡುವುದು ಅನಿವಾರ್ಯವಾದರೆ ಉಪವಿಭಾಗ ಕೇಂದ್ರವಾಗಿರುವ ಬೈಲಹೊಂಗಲವನ್ನು ಪ್ರತ್ಯೇಕ ಜಿಲ್ಲಾ ಮಾಡಬೇಕು’ ಎಂದು ಒತ್ತಾಯಿಸಿದರು.