ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಜ್ಯ ವಸ್ತುಗಳಿಂದ ಪಾಠೋಪಕರಣ ತಯಾರಿಕೆ

Last Updated 23 ಡಿಸೆಂಬರ್ 2017, 5:30 IST
ಅಕ್ಷರ ಗಾತ್ರ

ಬಿ.ಸಿ.ಮೋಹನ್ ಕುಮಾರ್

ನಾಗಮಂಗಲ: ಮಕ್ಕಳಿಗೆ ಮರಳಿನಲ್ಲಿ ಅಕ್ಷರ ತಿದ್ದಿಸುತ್ತಿದ್ದ , ಜೇಡಿ ಮಣ್ಣಿನಲ್ಲಿ ಗಾಡಿ, ಶಿಲ್ಪಗಳನ್ನು ತಯಾರಿಸಿ ಕೌಶಲ ಕಲಿಸುವ ಕಾಲವೊಂದಿತ್ತು. ಆದರೆ ಈಚೆಗೆ ಶಿಕ್ಷಣ ವ್ಯವಸ್ಥೆ ಹಲವು ಬದಲಾವಣೆಗೆ ಒಳಗಾಗಿದೆ. ಇದರ ನಡುವೆಯೇ ಪಾಠಗಳಿಗೆ ಸೃಜನಶೀಲತೆ ಲೇಪಿಸಿ, ಹಲವು ಕೌಶಲಗಳ ಮೂಲಕ ವಿಜ್ಞಾನ ಕಲಿಸುವ ತಾಲ್ಲೂಕಿನ ಪಿ. ನೇರಲಕೆರೆಯ ಸರ್ಕಾರಿ ಪ್ರೌಢಶಾಲೆ ವಿಜ್ಞಾನ ಶಿಕ್ಷ ಡಿ.ಎಂ. ಸೋಮೇಶಾರಾಧ್ಯ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವೃತ್ತಿಯಲ್ಲಿ ಶಿಕ್ಷಕರಾದರೆ ಪ್ರವೃತ್ತಿಯಲ್ಲಿ ನಾಟಕ ರಚನಾಕಾರ. ಸರಳ ವಿಜ್ಞಾನದ ಉಪಕರಣಗಳ ತಯಾರಕ, ಧ್ವನಿ ಸುರುಳಿಗೆ ಸಾಹಿತ್ಯ ರಚನೆ, ಜನಪ್ರಿಯ ವಿಜ್ಞಾನ ಉಪನ್ಯಾಸ, ಪವಾಡ ರಹಸ್ಯ ಬಯಲು. ಹೀಗೆ ಹತ್ತು ಹಲವು ವಿಷಯಗಳಲ್ಲಿ ತೊಡಗಿಸಿಕೊಂಡಿರುವ ಬಹುಮುಖ ಪ್ರತಿಭೆಯ ವ್ಯಕ್ತಿ ಸೋಮೇಶಾರಾಧ್ಯ ಹಳ್ಳಿಗಾಡಿನ ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ತಿಳಿವಳಿಕೆಯನ್ನು ಧಾರೆ ಎರೆಯುತ್ತಿದ್ದಾರೆ. ಹಾಸನ ಜಿಲ್ಲೆ , ಚನ್ನರಾಯಪಟ್ಟಣ ತಾಲ್ಲೂಕಿನ, ತೋಟಿ ಗ್ರಾಮದ ಡಿ.ಎಂ. ಸೋಮೇಶರಾದ್ಯ, ವಿದ್ಯಾರ್ಥಿ ದಿನಗಳಿಂದಲೇ ವಿಜ್ಞಾನದ ಬಗ್ಗೆ ಆಸಕ್ತಿವುಳ್ಳವರಾಗಿದ್ದರು, ಚನ್ನರಾಯಪಟ್ಟಣದ ಆದಿಚುಂಚನಗಿರಿ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಓದುವಾಗ ಪ್ರಾಧ್ಯಾಪಕರಾದ ಸಸ್ಯ ವಿಜ್ಞಾನದ ಕಂಬೇಗೌಡ ಮತ್ತು ರಾಸಾಯನ ವಿಜ್ಞಾನದ ಶಂಕರೇಶ್ ಪ್ರಭಾವ ಬೀರಿದರು ಎಂದು ವಿನಮ್ರತೆಯಿಂದ ನೆನೆಯುತ್ತಾರೆ.

ದೊಡ್ಡ ದೊಡ್ಡ ಖಾಸಗಿ ಶಾಲೆಗಳಲ್ಲಿ ಸುಸಜ್ಜಿತವಾದ ಪ್ರಯೋಗ ಶಾಲೆಗಳಿರುತ್ತವೆ. ಆ ಅನುಕೂಲ ಸರ್ಕಾರಿ ಶಾಲೆಗಳಲ್ಲಿ ಇರುವುದಿಲ್ಲ. ಆದರೆ ಈ ಶಾಲೆಯಲ್ಲಿ ಪ್ರಯೋಗಕ್ಕೇನು ಕೊರತೆ ಇಲ್ಲ. ವಿಜ್ಞಾನ ಮಕ್ಕಳಿಗೆ ಕಬ್ಬಿಣದ ಕಡಲೆಯಾಗದಂತೆ, ಸ್ಥಳದಲ್ಲೇ ಸಿಗಬಹುದಾದ ವಸ್ತುಗಳನ್ನು ಬಳಸಿ ಪಾಠೋಪಕರಣ ತಯಾರಿಸಿ ವಿಜ್ಞಾನದ ಪ್ರಾತ್ಯಕ್ಷಕೆ ನೀಡುತ್ತ ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ವಿಜ್ಞಾನ ಕೈಗೆಟುಕುವಂತೆ ಮಾಡುತ್ತಾ ಬಂದಿದ್ದಾರೆ.

ಶಿಕ್ಷಕನಾಗಿ ವೃತ್ತಿ ಆರಂಭಿಸುವ ಮುನ್ನವೇ ಚನ್ನರಾಯಪಟ್ಟಣ ತಾಲ್ಲೂಕಿನ 100ಕ್ಕೂ ಹೆಚ್ಚು ಶಾಲೆಗಳಲ್ಲಿ ವಿಜ್ಞಾನದ ಕುರಿತು ಪ್ರಾತ್ಯಕ್ಷಿಕೆ ಮೂಲಕ ತಿಳಿಸುವ ಪ್ರಯತ್ನ ಮಾಡಿದ್ದಾರೆ. ನಾಗಮಂಗಲ ತಾಲ್ಲೂಕಿನಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ ಅವರು ಶಿಕ್ಷಕರ ಕಲ್ಯಾಣ ನಿಧಿ ನಡೆಸುವ ಸ್ಥಳದಲ್ಲೇ ಪಾಠೋಪಕರಣ ತಯಾರಿಕ ಸ್ಪರ್ಧೆಯಲ್ಲಿ ಮಂಡ್ಯ ಜಿಲ್ಲೆಯನ್ನು ಸತತ 8 ಬಾರಿ ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಿ, 3 ಬಾರಿ ಬಹುಮಾನ ಗಳಿಸಿದ್ದಾರೆ. ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ 5 ಬಾರಿ ವಲಯ ಮಟ್ಟಕ್ಕೆ ಆಯ್ಕೆಯಾಗಿದ್ದು, 2 ಬಾರಿ ರಾಜ್ಯಮಟ್ಟಕ್ಕೆ ಇವರ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಮೈಸೂರಿನಲ್ಲಿ ಡಿ.10 ರಿಂದ 12 ರವರೆಗೆ ನಡೆದ ಶಿಕ್ಷಕರ ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಭಾಗವಹಿಸಿ ಬರ್ನೋಲಿನ್ ತತ್ವ, ಬಾಯ್ಲರ್‌ ನಿಯಮದ ಅನ್ವಯಗಳು ಮತ್ತು ಸರಳ ಪ್ರೊಜೆಕ್ಟರ್ ಕುರಿತು ಪ್ರದರ್ಶಿಸಿದ ಮಾದರಿಗೆ ದಕ್ಷಿಣ ಭಾರತ ಮಟ್ಟದ ಸ್ಪರ್ಧೆಗೆ ಅವಕಾಶ ಕಲ್ಪಿಸಿದೆ.

ಪ್ರತಿಬಾ ಕಾರಂಜಿ ನಾಟಕ ಸ್ಪರ್ಧೆಯಲ್ಲಿ ವಿಚಾರವಾದಿ ನರೇಂದ್ರ ದಾಭೋಲ್ಕರ್ ವೈಚಾರಿಕ ಚಿಂತನೆ ಕುರಿತು ರಚಿಸಿದ ‘ ಭದ್ರ ಮುಷ್ಠಿ’ ನಾಟಕ ರಾಜ್ಯ ಮಟ್ಟದಲ್ಲಿ ಪ್ರದರ್ಶನಗೊಂಡಿದೆ. ಇದೇ ವರ್ಷ ರಾಜ್ಯ ಮಟ್ಟದ ವಿಜ್ಞಾನ ನಾಟಕ ಸ್ಪರ್ದೆಯಲ್ಲಿ ಪ್ರದರ್ಶನಗೊಂಡ ‘ಹಸಿರು ಶಕ್ತಿ ಮಹಾತ್ಮೆ’ ನಾಟಕದಲ್ಲಿ ಸೋಮೇಶಾರಾದ್ಯ ಉತ್ತಮ ನಾಟಕ ರಚನಕಾರ ಪ್ರಶಸ್ತಿ ಪಡೆದು ಕೊಂಡಿದ್ದಾರೆ. ಶಿಕ್ಷಕರ ವಿಭಾಗದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಇವರು ತಯಾರಿಸಿದ ‘ಹೀಗೊಂದು ಸರಳ ಪ್ರೊಜೆಕ್ಟರ್ ’ ಮಾದರಿಯು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ. ಸ್ಥಳದಲ್ಲೇ ಪಾಠೋಪಕರಣ ತಯಾರಿಕಾ ಸ್ಪರ್ಧೆಯಲ್ಲಿ ‘ಬಾಯ್ಲರ್ ನಿಯಮ’ ಕುರಿತಾದ ಮಾದರಿ ತಯಾರಿಕೆ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ. ಒಟ್ಟಾರೆ 17–18ನೇ ಸಾಲಿನಲ್ಲಿ ಇವರು ಮೂರು ವಿವಿಧ ಸ್ಪರ್ದೆಗಳಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇವರು ಬರೆದ ವಿಜ್ಞಾನ ಪ್ರಯೋಗ ದೀಪಿಕಾ ಪುಸ್ತಕ ಮಂಗಳೂರು ಮತ್ತು ರಾಯಚೂರು ಜಿಲ್ಲಾ ಡಯಟ್ ಖರೀದಿಸಿದ್ದು, ಅದು ಅಲ್ಲಿನ ಪ್ರೌಢಶಾಲೆ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದಾರೆ. ಏಡ್ಸ್ ಮತ್ತು ಹೃದ್ರೋಗಿಗಳ ಕುರಿತಾದ ಕಥೆ ಬರೆಯಲು ವೈದ್ಯರನ್ನು ಸಂದರ್ಶಿಸಲು ಕನ್ನಡ ಸಾಹಿತ್ಯ ಪರಿಷತ್ ಅನುಮತಿ ನೀಡಿದೆ.   ಹಲವು ಧ್ವನಿಸುರಳಿಗಳಿಗೆ ಸಾಹಿತ್ಯ ರಚಿಸಿ ಕೊಟ್ಟಿದ್ದಾರೆ.

ತಾಲ್ಲೂಕಿನಲ್ಲಿ ತಮ್ಮ ಶೈಕ್ಷಣಿಕ ಚಟುವಟಿಕೆಗಳಿಗೆ ಸಹಕರಿಸುತ್ತಿರುವ ಶಿಕ್ಷಣ ಸಂಯೋಜಕ ಎನ್.ಕೆ. ನರಸಿಂಹಪ್ರಸಾದ್, ಆದಿಚುಂಚನಗಿರಿ ಮಠದ ಪಿಯು ಕಾಲೇಜಿನ ಉಪನ್ಯಾಸಕ ರಾಮಚಂದ್ರು, ಶೆಟ್ಟಿಹಳ್ಳಿ ಫ್ರೌಢಶಾಲೆ ಮುಖ್ಯ ಶಿಕ್ಷಕ ನಂಜರಾಜು ಅವರನ್ನು ಕೃತಜ್ಞತೆಯಿಂದ ಸ್ಮರಿಸುತ್ತಾರೆ. ಇವರ ಸಾಧನೆಯನ್ನು ಗುರುತಿಸಿ ಪಟ್ಟಣದ ರೋಟರಿಸಂಸ್ಥೆ, ಜ್ಞಾನಂ–ವಿಜ್ಞಾನ ವೇದಿಕೆ ಮತ್ತು ಮಂಡ್ಯದ ಕರ್ನಾಟಕ ಸಂಘ ಉತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT