ಚನ್ನಗಿರಿ: ತಾಲ್ಲೂಕಿನ ಕಗ್ಗಿ ಸಮೀಪದ ಅರಣ್ಯದಲ್ಲಿ ಶನಿವಾರ ಸೆರೆಯಾಗಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಶಿವಮೊಗ್ಗದ ಸಕ್ರೆಬೈಲು ಬಿಡಾರಕ್ಕೆ ಭಾನುವಾರ ಲಾರಿ ಮೂಲಕ ಕಳುಹಿಸಿಕೊಟ್ಟರು.
ಶನಿವಾರ ಕತ್ತಲು ಆವರಿಸಿದ್ದರಿಂದ ಸೆರೆ ಹಿಡಿದ ಕಾಡಾನೆಯನ್ನು ಅರಣ್ಯದಿಂದ ಹೊರಕ್ಕೆ ತರಲು ಸಾಧ್ಯವಾಗಿರಲಿಲ್ಲ. ಮರಕ್ಕೆ ಕಟ್ಟಿಹಾಕಿ, ಇಡೀ ರಾತ್ರಿ ಸಿಬ್ಬಂದಿ ಕಾಡಿನೊಳಗೆ ಕಾವಲು ಇದ್ದರು.
‘ಸತತ ಏಳು ದಿನ ನಡೆದ ಕಾರ್ಯಾಚರಣೆ ಮುಕ್ತಾಯಗೊಂಡಿದೆ. ಕಾಡಾನೆ ಸೆರೆ ಹಿಡಿಯಲು ಬಂದಿದ್ದ ಆನೆಗಳಲ್ಲಿ ಈಗಾಗಲೇ ನಾಲ್ಕನ್ನು ಸಕ್ರೆಬೈಲಿಗೆ ಕಳುಹಿಸಲಾಗಿದೆ. ಇನ್ನೂ ಮೂರು ಆನೆಗಳು ಈ ಕಾಡಿನಲ್ಲಿಯೇ ಉಳಿದು ವಿಶ್ರಾಂತಿ ತೆಗೆದುಕೊಳ್ಳುತ್ತಿವೆ. ಸೋಮವಾರ ಇಲ್ಲವೇ ಮಂಗಳವಾರ ಇನ್ನುಳಿದ ಆನೆಗಳು ಕೂಡ ಸಕ್ರೆಬೈಲಿಗೆ ತೆರಳಲಿವೆ’ ಎಂದು ಮಾವಿನಕಟ್ಟೆ ವಲಯ ಅರಣ್ಯಾಧಿಕಾರಿ ವೀರೇಶ್ನಾಯ್ಕ ತಿಳಿಸಿದರು.
‘ಲಾರಿಗೆ ಹತ್ತಿಸಲು ಪ್ರಯತ್ನಪಟ್ಟಾಗ ಕಾಡಾನೆ ಭಾರಿ ಪ್ರತಿರೋಧ ವ್ಯಕ್ತಪಡಿ ಸಿತು. ಪಳಗಿದ ಆನೆಗಳ ಸಹಾಯದಿಂದ ಅದನ್ನು ಲಾರಿಯೊಳಗೆ ದಬ್ಬಲಾಯಿತು. ನಂತರ ಅಭಿಮನ್ಯು, ಕೃಷ್ಣ ಹಾಗೂ ವಿಕ್ರಮ್ ಪಳಗಿದ ಆನೆಗಳ ನಾಯಕತ್ವ ದಲ್ಲಿ ಕಾರ್ಯಾಚರಣೆ ಪೂರ್ಣಗೊಳಿಸ ಲಾಯಿತು’ ಎಂದು ಡಿಸಿಎಫ್ ಬಾಲಚಂದ್ರ ಹೇಳಿದರು.