ವಿಜಯಪುರ: ಜಿಲ್ಲೆಯಲ್ಲಿ ತೊಗರಿ ಬೆಳೆದ ಪ್ರತಿಯೊಬ್ಬ ರೈತರಿಂದ 20 ಕ್ವಿಂಟಲ್ ಪ್ಯಾಕ್ ಗುಣಮಟ್ಟದ ತೊಗರಿ ಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಅನೂಕೂಲವಾಗುವಂತೆ ಹೋಬಳಿ ಕೇಂದ್ರಗಳಲ್ಲಿ ಖರೀದಿ ಕೇಂದ್ರ ತೆರೆಯಲು ಜಿಲ್ಲಾಡಳಿತ ನಿರ್ಧರಿಸಿದೆ.
ಪ್ರತಿ ಕ್ವಿಂಟಲ್ಗೆ ₹ 5,450 ಹಾಗೂ ರಾಜ್ಯ ಸರ್ಕಾರದ ಪ್ರೋತ್ಸಾಹ ಧನ ₹ 550 ಸೇರಿ ಒಟ್ಟು ₹ 6,000 ದರದಲ್ಲಿ ಖರೀದಿಸಲು ತೀರ್ಮಾನಿಸಿ, ನಾಫೇಡ್ ಗೆ ಅನುಮತಿ ಕೋರಲಾಗಿದೆ. ಅನುಮತಿ ನಂತರ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ತಿಳಿಸಿದ್ದಾರೆ.
ಅಭಿಪ್ರಾಯ ಸಂಗ್ರಹ ಸಭೆ ನಾಳೆ
ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತಕ್ಕೆ ಸ್ವಾಧೀನ ಗೊಳ್ಳುವ ಜಮೀನುಗಳಿಗೆ ಏಕ ರೂಪದ ದರ ನಿಗದಿಪಡಿಸಲು ಸಂತ್ರಸ್ತರು ಹಾಗೂ ಜನಪ್ರತಿನಿಧಿಗಳ ಸಲಹೆ ಹಾಗೂ ಅಭಿಪ್ರಾಯ ಸಂಗ್ರಹಿಸಲು, ಸಂವಾದ ನಡೆಸಲು ಡಿ.26 ರಂದು ಬೆಳಿಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ.
ಯೋಜನೆಯಿಂದ ಬಾಧಿತ ಎಲ್ಲ ರೈತರು ತಮ್ಮ ದಾಖಲಾತಿಗಳೊಂದಿಗೆ, ಮನವಿಗಳನ್ನು ಹಾಗೂ ಅಭಿಪ್ರಾಯಗಳನ್ನು ಸಲ್ಲಿಸಲು ಸಭೆಯಲ್ಲಿ ಭಾಗವಹಿಸುವಂತೆ ತಹಶೀಲ್ದಾರ್ ಎಂ.ಎನ್.ಬಳಿಗಾರ ತಿಳಿಸಿದ್ದಾರೆ.