ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನಶಂಕರಿ ತೇರಿಗೆ ಮಾಡಲಗೇರಿ ಹಗ್ಗದ ನಂಟು

Last Updated 31 ಡಿಸೆಂಬರ್ 2017, 10:24 IST
ಅಕ್ಷರ ಗಾತ್ರ

ಉತ್ತರ ಕರ್ನಾಟಕದ ಬಹು ದೊಡ್ಡ ಜಾತ್ರೆ ಎಂದು ಪ್ರಸಿದ್ಧಿ ಪಡೆದಿರುವ ಬಾದಾಮಿ ಬನಶಂಕರಿ ಜಾತ್ರೆಗೂ ಗದಗ ಜಲ್ಲೆಯ ರೋಣ ತಾಲ್ಲೂಕಿನ ಮಾಡಲಗೇರಿ ಗ್ರಾಮಕ್ಕೂ ಅವಿನಾಭಾವ ನಂಟು ಇದೆ.

ಜನವರಿ 2ರಂದು ಬನದ ಹುಣ್ಣಿಮೆಯ ನಿಮಿತ್ತ ನಡೆಯುವ ಬನಶಂಕರಿ ದೇವಿ ರಥೋತ್ಸವಕ್ಕೆ, ದೇವಿಯ ತವರು ಮನೆಯವರು ಎಂದು ಕರೆಯಿಸಿಕೊಳ್ಳುವ ಮಾಡಲಗೇರಿ ಗ್ರಾಮದ ಜನರು, ಹಿಗ್ಗಿನಿಂದ ಹಗ್ಗವನ್ನು ಹದಿನಾರು ಎತ್ತಿನ ಎರಡು ಹಳಿಬಂಡಿ ಮೂಲಕ ಬಾದಾಮಿಯ ಬನಶಂಕರಿ ದೇವಿ ರಥಕ್ಕೆ ಸಮರ್ಪಣೆ ಮಾಡುತ್ತಾರೆ. ಆ ಮೂಲಕ ತಮ್ಮದೇ ಆದ ವಿಶೇಷ ಮೆರೆಯುತ್ತಾರೆ.

18ನೇ ಶತಮಾನದ ಸಾಂಪ್ರದಾಯ:

ಮಾಡಲಗೇರಿಯ ಆರು ಮನೆತನದ ಗೌಡರಿಂದ ತೆರಿನ ಹಗ್ಗವನ್ನು ಒಯ್ಯುವ ಪದ್ಧತಿ 18ನೇ ಶತಮಾನದಿಂದಲೂ ಚಾಲ್ತಿಯಲ್ಲಿದೆ ಎನ್ನುತ್ತಾರೆ ಗ್ರಾಮದ ಹಿರಿಯರು. ಈ ಆರು ಮನೆತನಗಳು ಮೂರು ಮನೆತನಕ್ಕೆ ಒಂದು ಹಳಿಬಂಡಿಯಂತೆ ಒಟ್ಟು ಎರಡು ಹಳಿಬಂಡಿಯಲ್ಲಿ ತೇರಿನ ಹಗ್ಗವನ್ನು ತಗೆದುಕೊಂಡು ಹೋಗುತ್ತಾರೆ.

ಒಂದೊಂದು ಹಳಿಬಂಡಿಗೆ 16 ಎತ್ತುಗಳನ್ನು ಹೂಡುತ್ತಾರೆ. ಈ ಹಳಿಬಂಡಿ ಆರಂಭದಲ್ಲಿ ಹೂಡುವ ಎತ್ತುಗಳು ಕಿಲಾರಿ ತಳಿಯ ಹೋರಿಗಳನ್ನು ಕುತನಿ ಜೂಲ, ತೋಗಲಿನ ಬಾಸಿಂಗ, ಹಣಿಕಟ್ಟು, ಗೊಂಡೆ, ಕಂಬನಸು, ಸೇವಂತಿಗೆ ಹೂ ಮೊದಲಾದ ಅಲಂಕಾರಿಕ ವಸ್ತುಗಳಿಂದ ಶೃಂಗರಿಸಲಾಗುತ್ತದೆ.

ಎರಡು ಹಳಿಬಂಡಿಗಳನ್ನು ತೆಗೆದುಕೊಂಡು ಉತ್ಸಾಹದಿಂದ ಮಲಪ್ರಭಾ ನದಿಯನ್ನು ದಾಟುತ್ತಾ ಶ್ರದ್ಧೆ– ಭಕ್ತಿಯಿಂದ ತಾಯಿಯ ನಾಮವಳಿಗಳಾದ ‘ಹದಿನಾರೆತ್ತಿನ ಹಳಿಬಂಡಿ ಬೇಡಿದ ಮಹೇಶ್ವರಿ ನಿನ್ನ ವಾಲಗೊ, ಮಾಡಲಗೇರಿ ನಾಡ ಗೌಡ್ರರಿಗೆ ವಾಸವಾದ ದೇವಿ ನಿನ್ನ ವಾಲಗೊ, ಹತ್ತಿಗಿಡದ ಸತ್ಯವ್ವ ನಿನ್ನ ವಾಲಗೊ, ಹೊಂಡ ದಂಡಿ ಪುಂಡ ಭರಮ ನಿನ್ನ ವಾಲಗೊ, ಯಂಕಚಿ ಎಳಿ ಮಾವು ಕೆದೂರ ಕರಿ ಮಾವು ಬಾ ದೇವಿ ಬಳಿ ಮಾವಿನ ತಂಪಿಗೆ ನೆಲಸಿದಂಥ ತಾಯಿ ನಿನ್ನ ವಾಲಗೊ’ ಎಂದು ದೇವಿಯನ್ನು ಸ್ಮರಿಸುತ್ತಾ ತಾಯಿಯ ಸನ್ನಿಧಿಗೆ ತೆರಳುವವರು.

ಉಲ್ಪಿ ಕೊಡುವ ಪದ್ಧತಿ:

ಬನಶಂಕರಿ ದೇವಿಯ ತವರು ಮಾಡಲಗೇರಿ ಗ್ರಾಮದ ಭಕ್ತರಿಗೆ ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಗೌರವ ಇದೆ. ಜಾತ್ರೆಗೆ ಬರುವ ಮಾಡಲಗೇರಿ ಗ್ರಾಮದವರಿಂದ ತೆಲೆಪಟ್ಟಿ ತೆಗೆದುಕೊಳ್ಳುವುದಿಲ್ಲ. ಕಾಯಿ ಒಡೆಸಿದರೂ ಹಣ ಪಡೆಯುವುದಿಲ್ಲ. ಬನಶಂಕರಿ ಪೂಜಾರಿಗಳು ಮಾಡಲಗೇರಿ ಗೌಡರ ಮನೆತನದವರಿಗೆ ಉಲ್ಪಿಕೊಡುವ ಪದ್ದತಿಯಿದೆ. ಇದೆಲ್ಲ ಮಾಡಲಗೇರಿ ಗ್ರಾಮ ಬನಶಂಕರಿದೇವಿಯ ತವರು ಎನ್ನುವ ಪ್ರತೀತಿಗೆ ಸಾಕ್ಷಿಯಾಗಿದೆ.

ಇದಕ್ಕೆ ಪುಷ್ಟಿ ನೀಡುವಂತೆ, ಜಾತ್ರೆಯಂದು ಬನಶಂಕರಿ ಕ್ಷೇತ್ರದಲ್ಲಿ ಮಾಡಲಗೇರಿಯ ಆರೂ ಗೌಡರ ಮನೆತನಗಳು ಹಳಿಬಂಡಿ ನಿಲ್ಲಿಸಲು ಪ್ರತ್ಯೇಕವಾದ ಸ್ಥಳಗಳನ್ನು ನಿಗದಿಪಡಿಸಿರಸಲಾಗುತ್ತದೆ.

ಬಂಡಿಯಲ್ಲಿ ನದಿ ದಾಟಬೇಕು:

ಬನಶಂಕರಿ ತೇರಿನ ಹಗ್ಗವನ್ನು ಪುಂಡಿನ ನಾರಿನಿಂದಲೇ ತಯಾರಿಸುತ್ತಾರೆ. ಹಗ್ಗಗಳು ಹರಿಮುರಿಯಾದಾಗ ಗ್ರಾಮಸ್ಥರು ಸಾವಿರಾರು ರೂಪಾಯಿ ಖರ್ಚು ಮಾಡಿ ರಿಪೇರಿ ಮಾಡಿಸುವರು.

ಇದಕ್ಕೂ ಮೊದಲು ರೇಷ್ಮೆ ಸೀರೆಗಳಿಗೆ ಪ್ರಸಿದ್ಧವಾದ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದ ಗ್ರಾಮಸ್ಥರು ತಾಯಿ ರಥಕ್ಕೆ ರೇಷ್ಮೆ ಹಗ್ಗವನ್ನು ತರುತ್ತೇವೆ ಎಂದರು. ತಾಯಿ ಒಪ್ಪದೆ ತನ್ನ ತವರಿನವರು ತರುವ ಪುಂಡಿ ನಾರಿನ ಹಗ್ಗವೇ ಬೇಕು ಎಂದು ಹೇಳಿದ್ದರ ಬಗ್ಗೆ ಕುರುಹುಗಳಿವೆ ಎನ್ನುತ್ತಾರೆ ಗ್ರಾಮದ ಹಿರಿಯರು.

ಎರಡು ಬಂಡಿಯವರು ರಾಜ್ಯದ ತುಂಬಾ ಸುತ್ತಾಡಿ, ಹೆಚ್ಚಿನ ಮೊತ್ತ ಬಲಾಢ್ಯ ಹೋರಿಗಳನ್ನು ತರುತ್ತಾರೆ. ಮಲಪ್ರಭಾ ನದಿಯಲ್ಲಿಯೇ ಹಳಿಬಂಡಿ ಸಾಗಬೇಕು. ಅಲ್ಲಿ ಅಶಕ್ತ ಹೋರಿಗಳನ್ನು ತಂದರೆ ಏನಾದರು ತೊಂದರೆಯಾದೀತು ಎನ್ನವ ಭಯ ಇವರನ್ನು ಕಾಡುತ್ತಿರುತ್ತದೆ.

ಹಗ್ಗ ಹೊತ್ತ ಹಳಿಬಂಡಿ ಬನದ ಹುಣ್ಣಿಮೆಯ ಬೆಳಿಗ್ಗೆ 8 ಗಂಟೆಗೆ ಮಾಡಲಗೇರಿ ಗ್ರಾಮದಿಂದ ಹೋರಟು ಸಾವಿರಾರು ಭಕ್ತರು ಮೆರವಣಿಗೆ ಮೂಲಕ, ಮಲಪ್ರಭಾ ನದಿ ದಾಟಿ ಬನದಲ್ಲಿ ನೆಲೆಸಿರುವ ಬನಶಂಕರಿ ದೇವಿ ಸನ್ನಿಧಿಯನ್ನು ಮದ್ಯಾಹ್ನ 3ಕ್ಕೆ ತಲುಪುತ್ತದೆ. ಈ ಹಗ್ಗದ ಹಳಿಬಂಡಿಯ ಮುಂಖಡರು ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿ ಆಶೀರ್ವಾದ ಪಡೆದು ತೇರು ಎಳೆಯಲು ಹಗ್ಗ ಅರ್ಪಿಸುತ್ತಾರೆ. ನಂತರ ಸಂಜೆ 6ಕ್ಕೆ ರಥೋತ್ಸವ ನಡೆಯುತ್ತದೆ.

ವಿಭಿನ್ನ ಅಡುಗೆ:

‘ಉತ್ತರ ಕರ್ನಾಟಕ ಎಂದ ಕೂಡಲೇ ನೆನಪಾಗುವುದು ಕಡಕ್ಕ ರೊಟ್ಟಿ ಮತ್ತು ಶೇಂಗಾ ಚಟ್ನಿ. ಇಂತಹ ಹತ್ತು ಹಲವಾರು ವಿಶೇಷವಾದ ಅಡುಗೆಗಳಾದ ಜೋಳದ ಬಾಣ, ಸಜ್ಜಿಯ ರೊಟ್ಟಿ, ಜೋಳದ ರೊಟ್ಟಿ, ಗುರೇಳ್ಳ ಚಟ್ನಿ, ಶೇಂಗಾ ಚಟ್ನಿ, ಅಗಸಿ ಚಟ್ನಿ, ಗಟ್ಟಿ ಮೊಸುರು, ಎಲ್ಲ ಹೋಳಿಗೆ, ಶೇಂಗಾ ಹೋಳಿಗೆ, ಕಡಬು (ಕಾರಚಿಕಾಯಿ)ವಿವಿಧ ರೀತಿಯ ತಪ್ಪಲ ಪದಾರ್ಥಗಳು ಸೇರಿದಂತೆ, ರುಚಿ ರುಚಿಯಾದ ತಿನಿಸುಗಳನ್ನು ತಯಾರಿಸಿಕೊಂಡು 3 ದಿನ ಜಾತ್ರೆಯಲ್ಲಿರುವ ಪದ್ಧತಿಯನ್ನು ಪ್ರಾಚೀನ ಕಾಲದಿಂದಲೂ ನಮ್ಮ ಹಿರಿಯರು ರೂಡಿಸಿಕೊಂಡು ಬಂದಿದ್ದಾರೆ’ ಎನ್ನುತ್ತಾರೆ ಮಾಡಲಗೇರಿಯ ಶಂಕ್ರಪ್ಪ ಸೂಳಿಕೇರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT