ಹೈದರಾಬಾದ್: ಅಪೂರ್ವ ಆಟ ಆಡಿದ ಕರ್ನಾಟಕದ ಪುರುಷರ ತಂಡದವರು ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸೀನಿಯರ್ ಕಬಡ್ಡಿ ಚಾಂಪಿಯನ್ಷಿಪ್ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಗಚ್ಚಿಬೌಲಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪ್ರೀ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಕರ್ನಾಟಕ ತಂಡ 37–27 ಪಾಯಿಂಟ್ಸ್ನಿಂದ ತಮಿಳುನಾಡು ತಂಡವನ್ನು ಸೋಲಿಸಿತು.
ಹಿಂದಿನ ಪಂದ್ಯಗಳಲ್ಲಿ ಬಲಿಷ್ಠ ಎದುರಾಳಿಗಳನ್ನು ಮಣಿಸಿ ವಿಶ್ವಾಸದಿಂದ ಪುಟಿಯುತ್ತಿದ್ದ ಶಬ್ಬೀರ್ ಪಡೆಯ ಆಟಗಾರರು ತಮಿಳುನಾಡು ವಿರುದ್ಧವೂ ಮೋಡಿ ಮಾಡಿದರು.
ಸುಖೇಶ್ ಹೆಗಡೆ ಮತ್ತು ಪ್ರಶಾಂತ್ ರೈ ಅವರ ಸೊಗಸಾದ ರೈಡಿಂಗ್ಗಳ ಬಲದಿಂದ ತಂಡ ಮೊದಲರ್ಧಕ್ಕೆ 18–11ರ ಮುನ್ನಡೆ ಗಳಿಸಿತು.
ದ್ವಿತೀಯಾರ್ಧದಲ್ಲೂ ಕರ್ನಾಟಕದ ಆಟ ರಂಗೇರಿತು. ಅನುಭವಿ ಆಟಗಾರ ಜೀವಕುಮಾರ್ ಮತ್ತು ಜವಾಹರ್ ವಿವೇಕ್ ಅವರು ಎದುರಾಳಿ ತಂಡದ ರೈಡರ್ಗಳನ್ನು ರಕ್ಷಣಾ ಬಲೆಯಲ್ಲಿ ಬಂಧಿಸಿ ತಂಡದ ಪಾಯಿಂಟ್ ಹೆಚ್ಚಿಸಿದರು. ಹೀಗಾಗಿ ತಂಡ ಏಕಪಕ್ಷೀಯವಾಗಿ ಗೆಲುವಿನ ತೋರಣ ಕಟ್ಟಿತು.
ಗುರುವಾರ ನಡೆಯುವ ಎಂಟರ ಘಟ್ಟದ ಹಣಾಹಣಿಯಲ್ಲಿ ಶಬ್ಬೀರ್ ಬಳಗ, ಉತ್ತರಾಖಂಡ ಮತ್ತು ಆಂಧ್ರಪ್ರದೇಶ ನಡುವಣ ಪಂದ್ಯದಲ್ಲಿ ಗೆದ್ದ ತಂಡದ ವಿರುದ್ಧ ಆಡಲಿದೆ.
ಮಹಿಳೆಯರಿಗೆ ನಿರಾಸೆ: ಕರ್ನಾಟಕ ಮಹಿಳಾ ತಂಡದವರು ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ಸೋತು ಟೂರ್ನಿಯಿಂದ ಹೊರ ಬಿದ್ದರು.
ಬುಧವಾರದ ಹೋರಾಟದಲ್ಲಿ ರಾಜ್ಯ ತಂಡ 23–27ರಿಂದ ಛತ್ತೀಸಗಡ ತಂಡಕ್ಕೆ ಮಣಿಯಿತು. ಮೊದಲರ್ಧದಲ್ಲಿ 11–13ರಿಂದ ಹಿಂದಿದ್ದ ಕರ್ನಾಟಕದ ವನಿತೆಯರು ಆ ಬಳಿಕವೂ ಗುಣಮಟ್ಟದ ಆಟ ಆಡಲು ವಿಫಲರಾದರು.