ಹಾಸನ: ‘ಎಲ್ಲದಕ್ಕೂ ಗೃಹ ಸಚಿವರು ರಾಜೀನಾಮೆ ಕೊಡಲು ಆಗುವುದಿಲ್ಲ’ ಎಂದು ದೀಪಕ್ ರಾವ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಟೀಕೆಗೆ ಅರಸೀಕೆರೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.
ಘಟನೆ ನಡೆಯಬಾರದಿತ್ತು, ಎಲ್ಲಾ ಜೀವವೂ ಅಮೂಲ್ಯ, ಕೊಲೆಗಡುಕರಿಗೆ ಶಿಕ್ಷೆಯಾಗಬೇಕು, ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ, ಈ ಬಗ್ಗೆ ತನಿಖೆ ನಡೆಯುತ್ತಿದೆ. ಸಮಾಜದಲ್ಲಿ ಕೋಮು ಗಲಭೆ ನಡೆಯಲು ಬಿಜೆಪಿ ಕಾರಣ, ಅವರೇ ಎಲ್ಲದಕ್ಕೂ ಹುಳಿ ಹಿಂಡುತ್ತಿದ್ದಾರೆ ಎಂದು ಟೀಕಿಸಿದರು.
ಜೆಡಿಎಸ್ ಅಧಿಕಾರಕ್ಕೆ ಬರಲ್ಲ ಎಂದು ಹೇಳಿದ್ದೇನೆ, ದೇವೇಗೌಡರು ಹೋರಾಟ ಮಾಡಬಾರದು ಎಂದು ಹೇಳಿಲ್ಲ, ನನ್ನ ವಿರುದ್ಧ ಭೂಹಗರಣದ ಬಿಜೆಪಿ ಆರೋಪ ಸುಳ್ಳು ಎಂದರು.
ಮಹದಾಯಿ ನೀರು ಹಂಚಿಕೆ ಸಂಬಂಧ ನ್ಯಾಯಮಂಡಲಿ ಎದುರು 7.56 ಟಿಎಂಸಿ ನೀರನ್ನು ಕರ್ನಾಟಕಕ್ಕೆ ನೀಡುವುದಾಗಿ ಗೋವಾ ಮುಖ್ಯಮಂತ್ರಿ ಪರ್ರೀಕರ್ ಅವರು ಪ್ರಮಾಣ ಪತ್ರ ಸಲ್ಲಿಸಲಿ ಎಂದು ಸಿಎಂ ಸಲಹೆ ನೀಡಿದರು.
ಯಡಿಯೂರಪ್ಪ ಮತ್ತು ಪರ್ರೀಕರ್ ಅವರು ರಾಜಕೀಯ ನಾಟಕವಾಡುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.