ನರಗುಂದ: ‘ಪಕ್ಷ ಯಾವುದೇ ಇರಲಿ, ರೈತರ ಹಿತ ಬಯಸಿದರೆ ಮಾತ್ರ ಒಳಿತಾಗುತ್ತದೆ’ ಎಂದು ಮಹದಾಯಿ ಹೋರಾಟ ಸಮಿತಿ ಸದಸ್ಯ ರಾಘವೇಂದ್ರ ಗುಜಮಾಗಡಿ ಹೇಳಿದರು. ಪಟ್ಟಣದಲ್ಲಿ ನಡೆಯುತ್ತಿರುವ ಮಹ\ದಾಯಿ ಧರಣಿಯ 906ನೇ ದಿನ ಶುಕ್ರವಾರ ಅವರು ಮಾತನಾಡಿದರು.
‘ಮಹದಾಯಿ ಸಮಸ್ಯೆ ಇತ್ಯರ್ಥಗೊಳ್ಳಲು ಮೂರು ವರ್ಷದ ಹೋರಾಟ ಸಾಕಾಗುವುದಿಲ್ಲ. ಎಲ್ಲ ಪಕ್ಷಗಳು ಇದನ್ನು ಚುನಾವಣೆ ದಾಳವಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿವೆಯೇ ಹೊರತು, ಇದರ ಜಾರಿಗೆ ಯಾವುದೇ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿಲ್ಲ. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಇದಕ್ಕೆ ಹಿನ್ನಡೆ ಆಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಮಹದಾಯಿ ನದಿ ನೀರಿನ ವಿಷಯದಲ್ಲಿ ಗೋವಾ ಪ್ರಾಮಾಣಿಕತೆ ಪ್ರದರ್ಶಿಸಬೇಕು. ಅಲ್ಲಿನ ಬಿಜೆಪಿ ಹಾಗೂ ಕಾಂಗ್ರೆಸ್ ಸೇರಿಕೊಂಡು ತೊಡಕುಗಳನ್ನು ನಿವಾರಿಸಬೇಕು. ಪ್ರಧಾನಿ ಮಧ್ಯಸ್ಥಿಕೆ ವಹಿಸುವ ಮೂಲಕ ಸಮಸ್ಯೆ ಇತ್ಯರ್ಥಪಡಿಸಲು ಹೆಚ್ಚಿನ ಗಮನ ನೀಡಬೇಕು’ ಎಂದು ಆಗ್ರಹಿಸಿದರು.
ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ ಮಾತನಾಡಿ ‘ಮಹದಾಯಿ ಯೋಜನೆ ಅನುಷ್ಠಾನದಲ್ಲಿ ರಾಜಕೀಯ ಬೇಡ. ಬಯಲುಸೀಮೆಯ ರೈತರ ಬಾಳು ಹಸನಾಗಬೇಕಿದೆ. ಅದಕ್ಕೆ ಎಲ್ಲ ರಾಜಕೀಯ ಪಕ್ಷಗಳು ಒಂದಾಗಬೇಕಿದೆ’ ಎಂದು ಹೇಳಿದರು.