ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೈಲಿಗೆ ಕಳುಹಿಸುವ ಉದ್ದೇಶ ಸರ್ಕಾರಕ್ಕಿಲ್ಲ‘

Last Updated 6 ಜನವರಿ 2018, 19:30 IST
ಅಕ್ಷರ ಗಾತ್ರ

ಚಳಿಗಾಲದ ಅಧಿವೇಶನದಲ್ಲಿ ಅನುಮೋದನೆ ಸಿಗದೇ ಸದ್ಯ ಮುಸ್ಲಿಂ ಮಹಿಳೆಯರ ಪಾಲಿಗೆ ತ್ರಿಶಂಕು ಸ್ವರ್ಗವಾಗಿರುವ ಮುಸ್ಲಿಂ ಮಹಿಳೆಯರ (ಮದುವೆ ಹಕ್ಕುಗಳ ರಕ್ಷಣೆ) ಮಸೂದೆ 2017 (ತ್ರಿವಳಿ ತಲಾಖ್‌ ನಿಷೇಧ ಮಸೂದೆ)ಯಲ್ಲಿ ಇರುವ ಅಂಶಗಳೇನು? 1985ರ ಶಾಬಾನು ಪ್ರಕರಣದಿಂದ 2017ರ ಶಹಬಾನೋ ಪ್ರಕರಣದವರೆಗೆ ಸುಪ್ರೀಂಕೋರ್ಟ್‌ನಲ್ಲಿ ಸುದೀರ್ಘ ಹೋರಾಟ ನಡೆಸುತ್ತ ಬಂದಿರುವ ಮುಸ್ಲಿಂ ಮಹಿಳೆಯರ ರಕ್ಷಣೆಗೆಂದೇ ರೂಪಿತಗೊಂಡಿರುವ ಈ ಮಸೂದೆ ನಿಜವಾಗಿಯೂ ಅವರ ಪರವಾಗಿ ಇದೆಯೇ? ಇದ್ದರೆ ಮಸೂದೆಯ ವಿರುದ್ಧ ಅಪಸ್ವರವೇಕೆ? ಮಸೂದೆ ಏನು ಹೇಳುತ್ತದೆ? ಈ ಎಲ್ಲಾ ಪ್ರಶ್ನೆಗಳಿಗೆ ಬಿಜೆಪಿ ರಾಜ್ಯ ಸಹ ವಕ್ತಾರ ಅನ್ವರ್‌ ಮಾನಿಪ್ಪಾಡಿ ಉತ್ತರಿಸಿದ್ದಾರೆ.

* ಧಾರ್ಮಿಕ ನಿಯಮಗಳಲ್ಲಿ ಸರ್ಕಾರದ ಹಸ್ತಕ್ಷೇಪ ಸರಿಯೇ?

ಮುಸ್ಲಿಂ ಸಮುದಾಯದ ಪುರುಷ ಒಂದೇ ಉಸಿರಿನಲ್ಲಿ ತಲಾಖ್.. ತಲಾಖ್.. ತಲಾಖ್.. ಎಂದು ಮೂರು ಸಲ ಹೇಳಿದರೆ ಆತನ ಹೆಂಡತಿ ನಿರ್ಗತಿಕಳಾಗುತ್ತಾಳೆ. ಮಕ್ಕಳೂ ಬೀದಿಗೆ ಬೀಳುತ್ತಾರೆ. ಇಂಥ ಒಂದು ಕೆಟ್ಟ ಪದ್ಧತಿಯನ್ನು ಕಿತ್ತೊಗೆಯಲು ಹೊರಟಾಗ ಕೆಲವರು ವಿರೋಧಿಸುತ್ತಾರೆ. ಧಾರ್ಮಿಕ ನಿಯಮಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ ಎಂಬ ಕೂಗೆಬ್ಬಿಸುತ್ತಾರೆ. ವಿವಾಹ, ವಿಚ್ಛೇದನ, ಜೀವನಾಂಶ ಇವೆಲ್ಲವೂ ನಾಗರಿಕ ಹಕ್ಕುಗಳೇ ಹೊರತು, ಧಾರ್ಮಿಕ ನಿಯಮಗಳಲ್ಲ. ನಮಾಜ್, ಉಪವಾಸ ವ್ರತ, ಹಜ್‌ ಯಾತ್ರೆ... ಮುಸ್ಲಿಮರ ಇಂತಹ ಧಾರ್ಮಿಕ ನಿಯಮಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಿಲ್ಲ. ತ್ರಿವಳಿ ತಲಾಖ್ ಎಂಬುದು ಮಾನವೀಯತೆಗೆ ವಿರುದ್ಧ
ವಾದ ಪದ್ಧತಿ. ಅದಕ್ಕಷ್ಟೇ ನಮ್ಮ ವಿರೋಧ.

* ಮಸೂದೆಯನ್ನು ಮುಸ್ಲಿಂ ಸಮುದಾಯ ಒಪ್ಪಿಕೊಂಡಿದೆಯೇ?

ಮುಸ್ಲಿಂ ಸಮುದಾಯದ ಶೇ 85ರಷ್ಟು ಮಂದಿ ಈ ಮಸೂದೆಯನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಇನ್ನುಳಿದ ಶೇ 15 ರಷ್ಟು ಮಂದಿ ಒಳಗೊಳಗೇ ಸಂತಸಪಟ್ಟರೂ, ಬಹಿರಂಗವಾಗಿ ಹೇಳಿಕೊಳ್ಳಲು ಆಗದ ಸ್ಥಿತಿಯಲ್ಲಿದ್ದಾರೆ. ತ್ರಿವಳಿ ತಲಾಖ್ ಮೂಲಕ ತಮ್ಮ ಹೆಣ್ಣು ಮಕ್ಕಳ ಜೀವನ ಹಾಳು ಮಾಡುವುದನ್ನು ಯಾರು ತಾನೆ ಇಷ್ಟ ಪಡುತ್ತಾರೆ. ವಿರೋಧ ಪಕ್ಷಗಳ ಮುಖಂಡರೂ ಮೌನಕ್ಕೆ ಶರಣಾಗುವ ಮೂಲಕ ಬೆಂಬಲ ಸೂಚಿಸಿದ್ದಾರೆ.

ಶಾಯಿರಾ ಬಾನು ಎಂಬ ಮಹಿಳೆಗೆ ತ್ರಿವಳಿ ತಲಾಖ್ ನೀಡಿದ ಪತಿ, ಮಕ್ಕಳ ಮುಖವನ್ನೂ ನೋಡುವಂತಿಲ್ಲ ಎಂದು ಬೆದರಿಕೆ ಹಾಕಿದ್ದಾನೆ. ಇಬ್ಬರು ಮಕ್ಕಳಾದ ಬಳಿಕ ನಾಲ್ಕೈದು ಸಲ ಗರ್ಭಪಾತವನ್ನೂ ಮಾಡಿಸಿದ್ದಾನೆ. ಇದು ಸರ್ವಾಧಿಕಾರಿ ಧೋರಣೆ ಎಂಬುದು ಮುಸ್ಲಿಂ ಮಹಿಳೆಯರಿಗೆ ಈಗ ಅರ್ಥವಾಗಿದೆ. ಹೀಗಾಗಿ, ಈ ಮಸೂದೆಯನ್ನು ಅವರು ಸಂತಸದಿಂದ ಒಪ್ಪಿದ್ದಾರೆ.

* ಗಂಡ ಜೈಲಿಗೆ ಹೋದರೆ, ಹೆಂಡತಿಗೆ ಜೀವನಾಂಶ ಕೊಡುವವರು ಯಾರು?

ಮಸೂದೆಯ ಉದ್ದೇಶ ಯಾರನ್ನೂ ಜೈಲಿಗೆ ಕಳುಹಿಸುವುದಲ್ಲ. ಅಥವಾ, ಒಂದು ಪಂಗಡದವರನ್ನು ಓಲೈಸುವುದೂ ಅಲ್ಲ. ಮಹಿಳೆಗೆ ಅನ್ಯಾಯವಾಗುವುದನ್ನು ತಡೆಯಬೇಕೆಂಬ ಧ್ಯೇಯ ಇದರಲ್ಲಿದೆ. ತ್ರಿವಳಿ ತಲಾಖ್ ನೀಡಿದ ಗಂಡ ಮೂರು ವರ್ಷ ಜೈಲಿನಲ್ಲಿರಬೇಕು ಎಂಬ ಕಾನೂನು ಜಾರಿಯಾದರೆ, ಪುರುಷ ಭಯದಲ್ಲಿ ಇರುತ್ತಾನೆ. ಆ ಹೆದರಿಕೆಯಲ್ಲೇ ಹೆಂಡತಿಯನ್ನು ಸಾಕುತ್ತಾನೆ ಎಂಬ  ಉದ್ದೇಶದಿಂದ ಈ ಮಸೂದೆ ರೂಪಿಸಲಾಗಿದೆ.‌

ಗಂಡ ಜೈಲಿಗೆ ಹೋದರೆ ಮಹಿಳೆ ಖಂಡಿತ ಸಮಸ್ಯೆಗೆ ಸಿಲುಕುತ್ತಾಳೆ. ಜೀವನಾಂಶವೂ ಸಿಗದೆ ಹೋದರೆ ಆಕೆಯ ತೊಂದರೆ ದುಪ್ಪಟ್ಟಾಗುತ್ತದೆ. ಅಂಥ ಕೃತ್ಯವನ್ನು ಸರ್ಕಾರವಾಗಲೀ, ನ್ಯಾಯಾಲಯವಾಗಲೀ ಮಾಡುವುದಿಲ್ಲ. ಜೈಲು ಪಾಲಾದವನು ಜೀವನಾಂಶ ನೀಡಲು ಸಾಧ್ಯವಾಗದಿದ್ದರೆ, ಆತನ ಆಸ್ತಿಯನ್ನು ಮುಟ್ಟುಗೋಲು ಹಾಕಿ ಅದರಿಂದ ಬರುವ ಗಳಿಕೆಯನ್ನು ಜೀವನಾಂಶದ ರೂಪದಲ್ಲಿ ಸಂತ್ರಸ್ತೆಗೆ ಕೊಡಲಾಗುವುದು. ಈ ಅಂಶವನ್ನು ಮಸೂದೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

* ಎಐಎಂಪಿಎಲ್‌ಬಿ ವಿರೋಧವಿದೆಯಲ್ಲಾ?

ಭಾರತದಲ್ಲಿ ಪ್ರತಿ ಧರ್ಮದವರಿಗೂ ವೈಯಕ್ತಿಕ ಕಾನೂನುಗಳಿವೆ. ಮದುವೆ ವಿಚಾರದಲ್ಲಿ ಮುಸ್ಲಿಂ ಯುವತಿಯರಿಗೆ ಅಷ್ಟು ಸ್ವಾತಂತ್ರ್ಯ ಇರುವುದಿಲ್ಲ. ಹುಡುಗ ಹೇಗಿದ್ದಾನೆ ಎಂಬುದನ್ನೂ ನೋಡದೆ ಮದುವೆ ಆಗುವಂಥ ಪರಿಸ್ಥಿತಿಯನ್ನು ಅವರು ಈಗಲೂ ಎದುರಿಸುತ್ತಿದ್ದಾರೆ. ಮುಸ್ಲಿಂ ಸಮುದಾಯಕ್ಕೆ  ಸಂಬಂಧಿಸಿದಂತೆ ಮದುವೆ, ವಿಚ್ಛೇದನ, ಉತ್ತರಾಧಿಕಾರ ಎಲ್ಲವೂ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಅಡಿಯಲ್ಲಿ ಬರುತ್ತವೆ.

ಮುಸ್ಲಿಂ ಸಮುದಾಯದ ಎಲ್ಲರೂ ನಮ್ಮ ಹತ್ತಿರ ಬರಲೇಬೇಕು ಎಂಬ ಇಚ್ಛೆಯನ್ನು ಮಂಡಳಿ ಹೊಂದಿದೆ. ತ್ರಿವಳಿ ತಲಾಖ್ ನಿಷೇಧವಾದರೆ ನಮ್ಮ ಶಕ್ತಿ ಕಡಿಮೆ ಆಗುತ್ತದೆ ಎಂಬ ಹೆದರಿಕೆ ಮಂಡಳಿಗೆ ಇದೆ. ನಾಲ್ಕೈದು ಮದುವೆ ಮಾಡಿಕೊಳ್ಳುವವರು ಹಾಗೂ ಹೆಣ್ಣನ್ನು ಗೌರವಿಸದ ಬೆರಳೆಣಿಕೆಯಷ್ಟು ಮಂದಿ ಮಾತ್ರ ಮಸೂದೆಯನ್ನು ವಿರೋಧಿಸುತ್ತಿರಬಹುದು.

* ಮಂಡಳಿಯ ಅಭಿಪ್ರಾಯವನ್ನೇ ಕೇಳಿಲ್ಲ ಎಂಬ ಆರೋಪವಿದೆಯಲ್ಲ?

ಈ ವಿಚಾರದಲ್ಲಿ ಎಐಎಂಪಿಎಲ್‌ಬಿಯನ್ನು ಮರೆಯಲ್ಲಿಟ್ಟು ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿಲ್ಲ. ಸರ್ಕಾರ ಕೂಡ ಮಂಡಳಿಯನ್ನು ಬದಿಗಿಟ್ಟು ಮಸೂದೆ ತಂದಿಲ್ಲ.

* ಗಂಡ–ಹೆಂಡತಿ ಸಂಬಂಧದ ಮಧ್ಯೆ ‘ಕ್ರಿಮಿನಲ್’ ಪ್ರಯೋಗ ಬೇಕೇ?

ಯಾವಾಗ ಗಂಡ ತಲಾಖ್ ಹೇಳುತ್ತಾನೋ, ಆ ಕೂಡಲೇ ಗಂಡ–ಹೆಂಡತಿ ಸಂಬಂಧ ಮುರಿದು ಬೀಳುತ್ತದೆಯಲ್ಲ. ಆತ ಅಷ್ಟು ಕಠೋರವಾಗಿ ಹೇಳುವಾಗ ಯಾವ ಸಂಬಂಧ ಉಳಿಯುತ್ತದೆ. ಈ ಕಾರಣದಿಂದಲೇ ಕಾನೂನು ಹೀಗೇ ಇರಬೇಕು ಎಂದು ಹಟ ಹಿಡಿದು ಮಸೂದೆ ತಂದಿದ್ದೇವೆ.

ಈಗ ನಿಷೇಧಿಸಲು ಹೊರಟಿರುವುದು ಒಂದೇ ಉಸಿರಿನಲ್ಲಿ ಮೂರು ಬಾರಿ ‘ತಲಾಖ್‌’ ಎಂದು ಹೇಳಿ ವಿಚ್ಛೇದನ ಪಡೆಯುವುದನ್ನು ಮಾತ್ರ. 90 ದಿನಗಳ ತಲಾಖ್-ಇ-ಹಸನ್ ಹಾಗೆಯೇ ಮುಂದುವರಿಯುತ್ತದೆ.

* ತ್ರಿವಳಿ ತಲಾಖ್‌ ರಾಜ್ಯದಲ್ಲಿ ಹೇಗಿದೆ?

ಇತ್ತೀಚೆಗೆ ಪುರುಷ ಎಸ್‌ಎಂಎಸ್, ವಾಟ್ಸ್‌ಆ್ಯಪ್, ಇ–ಮೇಲ್‌ನಲ್ಲೂ ತಲಾಖ್.. ತಲಾಖ್.. ತಲಾಖ್ ಎಂದು ಸಂದೇಶ ಕಳುಹಿಸಿ ವಿಚ್ಛೇದನ ಪಡೆಯುತ್ತಿದ್ದಾನೆ. ಇಷ್ಟು ಸರಳವಾಗಿ ಗಂಡ–ಹೆಂಡತಿ ಸಂಬಂಧ ಮುರಿಯುವ ಈ ಪದ್ಧತಿಯನ್ನು ಧಾರ್ಮಿಕ ನಿಯಮ ಎಂದು ಕರೆಯಲು ಸಾಧ್ಯವೇ?

ರಾಜ್ಯದ ಕರಾವಳಿ ಭಾಗಗಳಲ್ಲಿ ತ್ರಿವಳಿ ತಲಾಖ್ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಕೆಲಸದ ನಿಮಿತ್ತ ದುಬೈಗೆ ಹೋಗುವ ಪತಿ, ಬೇರೆ ಮಹಿಳೆ ಜತೆ ಸಂಸಾರ ಪ್ರಾರಂಭಿಸುತ್ತಾನೆ. ಆನಂತರ ಎಸ್‌ಎಂಎಸ್ ಮೂಲಕ ಮೂರು ಸಲ ತಲಾಖ್ ಕಳುಹಿಸಿ ವಿಚ್ಛೇದನ ಹೇಳುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT