ಲಖನೌ: ‘ಮದರಸಾಗಳು ಜಿಹಾದ್ ಪಾಠವನ್ನು ಹೇಳಿಕೊಡುವ ಮೂಲಕ ಮಕ್ಕಳು ಉಗ್ರ ಸಂಘಟನೆಯನ್ನು ಸೇರುವಂತೆ ಪ್ರಚೋದಿಸುತ್ತಿವೆ’ ಎಂದು ಉತ್ತರಪ್ರದೇಶದ ಶಿಯಾ ಸೆಂಟ್ರಲ್ ವಕ್ಫ್ ಬೋರ್ಡ್ ಅಧ್ಯಕ್ಷ ವಾಸೀಂ ರಿಜ್ವಿ ಆರೋಪಿಸಿದ್ದು ಇವುಗಳನ್ನು ಮುಚ್ಚಬೇಕು ಎಂದು ಆಗ್ರಹಿಸಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಅವರು, ಮದರಸಾಗಳು ಧರ್ಮದ ಶಿಕ್ಷಣದ ಹೆಸರಿನಲ್ಲಿ ಮಕ್ಕಳನ್ನು ಹಾದಿತಪ್ಪಿಸುತ್ತಿವೆ’ ಎಂದು ಆರೋಪಿಸಿದ್ದಾರೆ.
‘ಮದರಸಾಗಳಲ್ಲಿ ಸಿಬಿಎಸ್ಇ, ಐಸಿಎಸ್ಇ ಶಿಕ್ಷಣವನ್ನು ಕಲಿಸಬೇಕು. ಇಸ್ಲಾಮಿಕ್ ಶಿಕ್ಷಣವನ್ನು ಐಚ್ಛಿಕ ವಿಷಯವಾಗಿ ಪರಿಗಣಿಸಬೇಕು, ಅಲ್ಲದೇ ಮುಸಲ್ಮಾನರೇತರರಿಗೂ ಅವಕಾಶ ನೀಡಬೇಕು’ ಎಂದು ಅವರು ಸಲಹೆ ನೀಡಿದ್ದಾರೆ.
‘ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮದರಸಾಗಳು ಪ್ರಮುಖ ಪಾತ್ರ ವಹಿಸಿದ್ದವು. ಇದೀಗ ಇಂತಹ ಶಾಲೆಗಳನ್ನು ಪ್ರಶ್ನಿಸುವ ಮೂಲಕ ರಿಜ್ವಿ ಅವರು ಅವಮಾನ ಮಾಡುತ್ತಿದ್ದಾರೆ’ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ( ಎಐಎಂಪಿಎಲ್ಬಿ)ಯ ವಕ್ತಾರ ಖಲಿಲೂರ್ ರೆಹಮಾನ್ ತಿಳಿಸಿದ್ದಾರೆ.