ಬೆಂಗಳೂರು: ಬ್ರಿಟನ್ ಡೆಪ್ಯುಟಿ ಹೈಕಮಿಷನರ್ ಡಾ. ಅಲೆಕ್ಸಾಂಡರ್ ಇವಾನ್ಸ್ ಮಂಗಳವಾರ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ರಾಜ್ಯ ರಾಜಕೀಯ ಮತ್ತು ಚುನಾವಣಾ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದರು.
ವಿಧಾನಸಭಾ ಚುನಾವಣೆ, ರಾಜಕೀಯ ಪಕ್ಷಗಳು ಮತ್ತು ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದರು. ಇಲ್ಲಿನ ರಾಜಕೀಯ ವಿದ್ಯಮಾನಗಳ ಬಗ್ಗೆ ಅವರು ಕುತೂಹಲ ಹೊಂದಿದ್ದಾರೆ ಎಂದು ಕುಮಾರಸ್ವಾಮಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಚುನಾವಣೆಯಲ್ಲಿ ನಮ್ಮ ಪಕ್ಷ ಯಾವ ವಿಷಯವನ್ನು ಜನರ ಮುಂದಿಡುತ್ತದೆ. ವಿವಿಧ ವಿಷಯಗಳ ಬಗ್ಗೆ ಪಕ್ಷ ಹೊಂದಿರುವ ನಿಲುವುಗಳ ಬಗ್ಗೆ ಅವರಿಗೆ ವಿವರಿಸಲಾಯಿತು. ವಿಶ್ವದ ವಿವಿಧ ರಾಜ್ಯಗಳು ಕರ್ನಾಟಕದ ಚುನಾವಣೆ ಬಗ್ಗೆ ಹೊಂದಿರುವ ಕುತೂಲಹವನ್ನು ಅವರು ನನ್ನೊಂದಿಗೆ ಹಂಚಿಕೊಂಡರು. ಸಮ್ಮಿಶ್ರ ಸರ್ಕಾರ ಸಾಧ್ಯತೆಯ ಬಗ್ಗೆಯೂ ಚರ್ಚಿಸಿದರು ಎಂದು ಅವರು ತಿಳಿಸಿದರು.
ಸತ್ಯ ಬಹಿರಂಗಪಡಿಸುತ್ತಿಲ್ಲ: ‘ಮಂಗಳೂರಿನ ದೀಪಕ್ರಾವ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಸತ್ಯ ಸಂಗತಿ ಬಹಿರಂಗಪಡಿಸುತ್ತಿಲ್ಲ. ಬಂಧಿತರಿಂದ ಯಾವ ಕಾರಣಕ್ಕೆ ಮಾಹಿತಿ ಪಡೆಯುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಕುಮಾರಸ್ವಾಮಿ ಹೇಳಿದರು.
‘ನಾನು ಸೋಮವಾರ ನೀಡಿದ ಹೇಳಿಕೆಯಿಂದ ಯುಟರ್ನ್ ಆಗಿಲ್ಲ. ಹತ್ಯೆಯಲ್ಲಿ ಬಿಜೆಪಿ ಕಾರ್ಪೊರೇಟರ್ ಬಗ್ಗೆ ಹೇಳಿದ್ದೇನೆಯೇ ಹೊರತು, ಹೆಸರು ಹೇಳಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಗೂ ಮಂಗಳೂರಿನಲ್ಲಿ ಶಾಂತಿ ನೆಲಸುವುದು ಬೇಕಿಲ್ಲ’ ಎಂದು ತಿಳಿಸಿದರು.