ಗಂಗಾವತಿ: ವಿಜಯಪುರದ ದಲಿತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು, ಕೋರೆಗಾಂವ ವಿಜಯೋತ್ಸವಕ್ಕೆ ಅಡ್ಡಿ, ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಸಂವಿಧಾನ ಬದಲಿಸುವ ಹೇಳಿಕೆ ನೀಡಿರುವುದನ್ನು ಖಂಡಿಸಿ ಎಡ ಪಕ್ಷಗಳು ಪಕ್ಷ ಹಾಗೂ ಪ್ರಗತಿಪರ ಸಂಘಟನೆಗಳು ಜ.12ರಂದು ಗಂಗಾವತಿ ಬಂದ್ಗೆ ಕರೆ ನೀಡಿವೆ.
ಒಕ್ಕೂಟದ ಪರವಾಗಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಪಿಐಎಂಎಲ್ ರಾಜ್ಯ ಸಮಿತಿ ಸದಸ್ಯ ಜೆ. ಭಾರದ್ವಾಜ್, ದೇಶದಲ್ಲಿ ಅಸಹಿಷ್ಣತೆ ಹೆಚ್ಚುತ್ತಿದೆ. ದಲಿತರು, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ ಎಂದರು.
ಹಿರಿಯ ದಲಿತ ಮುಖಂಡ ಆರತಿ ತಿಪ್ಪಣ್ಣ ಮಾತನಾಡಿ, ಪ್ರತ ವರ್ಷ ಕೋರೆಗಾಂವ್ ವಿಜಯೋತ್ಸವ ಆಚರಿಸಲಾಗುತ್ತಿತ್ತು. ಆದರೆ, ಈ ಬಾರಿ ವಿಜಯೋತ್ಸವಕ್ಕೆ ಮೇಲ್ವರ್ಗದ ಅದರಲ್ಲೂ ಬಿಜೆಪಿ, ಆರ್ಎಸ್ಎಸ್ ಮತ್ತು ಭಜರಂಗದಳದ ಯುವಕರು ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿದರು.
ಸಂವಿಧಾನ ಬದಲಿಸುವ ಹೇಳಿಕೆ ನೀಡಿರುವ ಅನಂತ ಕುಮಾರ ಹೆಗಡೆ ಕೂಡಲೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಸಿಐಟಿಯು ಸಂಘಟನೆಯ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ನಿರುಪಾದಿ ಬೆಣಕಲ್, ಆಮ್ ಆದ್ಮಿ ಪಕ್ಷದ ಗಂಗಾವತಿ ತಾಲ್ಲೂಕು ಘಟಕದ ಸಂಚಾಲಕ ಶರಣಪ್ಪ ಸಜ್ಜಿಹೊಲ ಮಾತನಾಡಿದರು.