ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ರಚಿಸಿರುವ ಆಯೋಗದ ವರದಿಯನ್ನು ಕೂಡಲೇ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ನೌಕರರ ಸಂಘ ಆಗ್ರಹಿಸಿದೆ.
ಆಯೋಗದ ಅಧ್ಯಕ್ಷ ಎಂ.ಆರ್. ಶ್ರೀನಿವಾಸಮೂರ್ತಿ ಅವರನ್ನು ಬುಧವಾರ ಭೇಟಿ ಮಾಡಿದ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಮಂಜೇಗೌಡ, ಉಪಾಧ್ಯಕ್ಷರಾದ ಗಿರಿಗೌಡ ಹಾಗೂ ದ್ವಿತೀಯಾ, ಎನ್ಪಿಎಸ್ ನೌಕರರ ಸಂಘದ ಅಧ್ಯಕ್ಷ ರಮೇಶ ಸಂಗಾ ಅವರಿದ್ದ ನಿಯೋಗ, ತಕ್ಷಣವೇ ವರದಿ ಸಲ್ಲಿಸುವಂತೆ ಒತ್ತಾಯಿಸಿತು.
‘ಡಿಸೆಂಬರ್ ಅಂತ್ಯದೊಳಗೆ ವರದಿ ಸಲ್ಲಿಸುವಂತೆ ಹೇಳಿದ್ದೀರಿ. ಜನವರಿ ಎರಡನೆ ವಾರ ಬಂದರೂ ವರದಿ ಸಲ್ಲಿಸುವ ಲಕ್ಷಣ ಕಾಣಿಸುತ್ತಿಲ್ಲ. ಸಂಘದ ಸದಸ್ಯರಿಗೆ ಉತ್ತರ ನೀಡುವುದೇ ಕಷ್ಟವಾಗಿದೆ. ಯಾವಾಗ ವರದಿ ನೀಡುತ್ತೀರಿ ಎಂದು ಸ್ಪಷ್ಟಪಡಿಸಿ ಎಂದು ಮಂಜೇಗೌಡ ಪಟ್ಟು ಹಿಡಿದರು’ ಎಂದು ಮೂಲಗಳು ಹೇಳಿವೆ.
‘ವರದಿಗೆ ಅಂತಿಮ ರೂಪ ನೀಡುತ್ತಿದ್ದೇವೆ. ಕಾಲಾವಕಾಶ ಮುಗಿಯವುದರೊಳಗೆ ವರದಿ ಸಲ್ಲಿಸುವುದಾಗಿ ಶ್ರೀನಿವಾಸಮೂರ್ತಿ ಹೇಳಿದರು’ ಎಂದೂ ಮೂಲಗಳು ತಿಳಿಸಿವೆ.