ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ ಜನರ ಮನಸ್ಸಿನಲ್ಲಿ ಅನುಮಾನಗಳು ಮೂಡುತ್ತವೆ’

Last Updated 12 ಜನವರಿ 2018, 19:56 IST
ಅಕ್ಷರ ಗಾತ್ರ

ಪ್ರೀತಿಯ ಮುಖ್ಯ ನ್ಯಾಯಮೂರ್ತಿಯವರೇ,

ತೀವ್ರ ನೋವು ಮತ್ತು ಕಳವಳದ ಕಾರಣದಿಂದಾಗಿ ನಾವು ನಿಮಗೆ ಈ ಪತ್ರವನ್ನು ಬರೆಯುವುದು ಸೂಕ್ತ ಎಂದು ಭಾವಿಸಿದ್ದೇವೆ. ಈ ನ್ಯಾಯಾಲಯ (ಸುಪ್ರೀಂ ಕೋರ್ಟ್‌) ನೀಡಿದ ಕೆಲವು ನಿರ್ದಿಷ್ಟ ತೀರ್ಪುಗಳು ಹೈಕೋರ್ಟ್‌ಗಳ ಸ್ವಾತಂತ್ರ್ಯ ಹಾಗೂ ಒಟ್ಟಾರೆಯಾಗಿ ನ್ಯಾಯದಾನ ವ್ಯವಸ್ಥೆಯ ಕಾರ್ಯಚಟುವಟಿಕೆಗಳ ಮೇಲೆ ಬೀರಿರುವ ನಕಾರಾತ್ಮಕ ಪರಿಣಾಮವನ್ನು ಹೇಳುವುದು, ಮುಖ್ಯ ನ್ಯಾಯಮೂರ್ತಿಗಳ (ಸಿಜೆಐ) ಕಚೇರಿಯ ಆಡಳಿತಾತ್ಮಕ ಚಟುವಟಿಕೆಗಳ ಮೇಲೆ ಆ ತೀರ್ಪುಗಳು ಉಂಟುಮಾಡಿರುವ ಪರಿಣಾಮವನ್ನು ತೋರಿಸುವುದು ಪತ್ರದ ಉದ್ದೇಶ.

ಕಲ್ಕತ್ತಾ, ಬಾಂಬೆ ಮತ್ತು ಮದ್ರಾಸ್‌ ಹೈಕೋರ್ಟ್‌ಗಳನ್ನು ಸ್ಥಾಪಿಸಿದ ದಿನದಿಂದಲೂ ಕೆಲವು ಸಂಪ್ರದಾಯಗಳನ್ನು ಒಪ್ಪಿಕೊಂಡು ಬರಲಾಗುತ್ತಿದೆ. ಈ ಕೋರ್ಟ್‌ಗಳನ್ನು ಸ್ಥಾಪಿಸಿದ ಸರಿಸುಮಾರು ಒಂದು ಶತಮಾನದ ನಂತರ ಸ್ಥಾಪನೆಯಾದ ಸುಪ್ರೀಂ ಕೋರ್ಟ್‌ ಕೂಡ ಈ ಸಂಪ್ರದಾಯಗಳನ್ನು ಒಪ್ಪಿಕೊಂಡಿದೆ. ಈ ಸಂಪ್ರದಾಯಗಳ ಮೂಲ ಇರುವುದು ಆಂಗ್ಲೊ–ಸ್ಯಾಕ್ಸನ್ ನ್ಯಾಯಶಾಸ್ತ್ರದಲ್ಲಿ.

ಯಾರಿಗೆ ಯಾವ ಪ್ರಕರಣದ ವಿಚಾರಣೆಯನ್ನು ವಹಿಸಬೇಕು, ಯಾವ ಪೀಠ ಯಾವ ರೀತಿಯ ಪ್ರಕರಣಗಳ ವಿಚಾರಣೆ ನಡೆಸಬೇಕು ಎಂಬುದನ್ನು ತೀರ್ಮಾನಿಸುವ ಅಧಿಕಾರ ಇರುವುದು ಸಿಜೆಐಗೆ ಎಂಬುದು ಎಲ್ಲರೂ ಒಪ್ಪಿಕೊಂಡಿರುವಂಥದ್ದು. ಒಂದಕ್ಕಿಂತ ಹೆಚ್ಚು ಪೀಠಗಳು, ನ್ಯಾಯಮೂರ್ತಿಗಳು ಇರುವ ನ್ಯಾಯಾಲಯಗಳಲ್ಲಿ ಕಲಾಪಗಳು ಸುಸೂತ್ರವಾಗಿ ನಡೆಯಲು ಇಂಥ ವ್ಯವಸ್ಥೆ ಅಗತ್ಯವೂ ಹೌದು. ಯಾವ ಪ್ರಕರಣಗಳನ್ನು ಯಾರು ವಿಚಾರಣೆ ಮಾಡಬೇಕು ಎಂಬುದನ್ನು ಹಂಚುವ ಕೆಲಸದಲ್ಲಿ ಸಿಜೆಐಗೆ ವಿಶೇಷ ಅಧಿಕಾರ ಇದೆ ಎಂಬ ನಿಯಮವನ್ನು ಒಪ್ಪಿಕೊಂಡು ಬಂದಿರುವುದು ಕೋರ್ಟ್‌ನ ಕಲಾಪಗಳು ಪರಿಣಾಮಕಾರಿಯಾಗಿ, ಶಿಸ್ತುಬದ್ಧವಾಗಿ ನಡೆಯಬೇಕು ಎಂಬ ಉದ್ದೇಶದಿಂದ. ಸಿಜೆಐಗೆ ತಮ್ಮ ಸಹೋದ್ಯೋಗಿಗಳಿಗಿಂತ ಹೆಚ್ಚಿನ ಕಾನೂನಾತ್ಮಕ ಅಥವಾ ಇನ್ಯಾವುದೇ ಬಗೆಯ ಅಧಿಕಾರ ಇದೆ ಎಂಬ ಕಾರಣಕ್ಕೆ ಅಲ್ಲ. ನ್ಯಾಯಮೂರ್ತಿಗಳೆಲ್ಲ ಸಮಾನರು, ಆದರೆ ಅವರಲ್ಲಿ ಸಿಜೆಐ ಮೊದಲ ಸ್ಥಾನದಲ್ಲಿ ನಿಲ್ಲುವ ವ್ಯಕ್ತಿ ಎಂಬುದು ಈ ದೇಶದ ನ್ಯಾಯಶಾಸ್ತ್ರ ಒಪ್ಪಿರುವ ವಿಚಾರ – ಉಳಿದ ನ್ಯಾಯಮೂರ್ತಿಗಳಿಗಿಂತ ಸಿಜೆಐ ಹೆಚ್ಚೂ ಅಲ್ಲ, ಕಡಿಮೆಯೂ ಅಲ್ಲ.

ಯಾವ ಪೀಠಕ್ಕೆ ಯಾವ ಪ್ರಕರಣವನ್ನು ವಹಿಸಬೇಕು ಎಂಬ ವಿಚಾರದಲ್ಲಿ ಸಿಜೆಐಗೆ ಮಾರ್ಗದರ್ಶನ ನೀಡಲು ಬಹುಕಾಲದಿಂದ ನಡೆದುಬಂದಿರುವ ಸಂಪ್ರದಾಯಗಳು ಇವೆ. ನ್ಯಾಯಪೀಠದಲ್ಲಿ ಎಷ್ಟು ಜನ ಇರಬೇಕು, ಆ ಪೀಠದಲ್ಲಿನ ಪ್ರಾತಿನಿಧ್ಯ ಹೇಗಿರಬೇಕು ಎಂಬುದನ್ನೂ ಈ ಸಂಪ್ರದಾಯಗಳು ಹೇಳುತ್ತವೆ.

ಒಬ್ಬರಿಗಿಂತ ಹೆಚ್ಚು ನ್ಯಾಯಮೂರ್ತಿಗಳು ಇರುವ ಈ ನ್ಯಾಯಾಲಯ (ಸುಪ್ರೀಂ ಕೋರ್ಟ್‌) ಸೇರಿದಂತೆ ನ್ಯಾಯಾಂಗದ ಯಾವುದೇ ಅಂಗಸಂಸ್ಥೆಯ ಸದಸ್ಯರು, ಯಾವ ಪ್ರಕರಣವನ್ನು ತಾವು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು, ಯಾವ ಪ್ರಕರಣಕ್ಕೆ ಎಷ್ಟು ಜನ ನ್ಯಾಯಮೂರ್ತಿಗಳ ಪೀಠ ರಚನೆಯಾಗಬೇಕು ಎಂದು ತೀರ್ಮಾನಿಸುವ ಅಧಿಕಾರವನ್ನು ತಾವೇ ಚಲಾಯಿಸಬಾರದು; ಸಿಜೆಐ ತೀರ್ಮಾನಕ್ಕೆ ಗೌರವ ಕೊಡಬೇಕು ಎಂಬುದು ಈ ಸಂಪ್ರದಾಯಗಳ ಜೊತೆಯಲ್ಲೇ ಪಾಲಿಸಿಕೊಂಡು ಬಂದಿರುವ ಇನ್ನೊಂದು ಸಂಪ್ರದಾಯ.

ಮೇಲೆ ಹೇಳಿರುವ ಎರಡು ನಿಯಮಗಳನ್ನು ಪಾಲಿಸದೆ ಇದ್ದಾಗ ಅಪ್ರಿಯ, ಅನಪೇಕ್ಷಿತ ಪರಿಣಾಮಗಳು ಉಂಟಾಗುತ್ತವೆ. ಸಂಸ್ಥೆಯ ಬಗ್ಗೆ ದೇಶದ ಜನರ ಮನಸ್ಸಿನಲ್ಲಿ ಅನುಮಾನಗಳು ಮೂಡುತ್ತವೆ. ನಿಯಮಗಳನ್ನು ಪಾಲಿಸದಿರುವುದರಿಂದ ಉಂಟಾಗುವ ಗೊಂದಲಗಳ ಬಗ್ಗೆ ಇಲ್ಲಿ ಪ್ರತ್ಯೇಕವಾಗಿ ಮಾತನಾಡುವ ಅಗತ್ಯ ಇಲ್ಲ.

ಈ ಎರಡು ನಿಯಮಗಳ ಪಾಲನೆ ಈಚಿನ ದಿನಗಳಲ್ಲಿ ಕಟ್ಟುನಿಟ್ಟಾಗಿ ಆಗಿಲ್ಲ ಎಂಬುದನ್ನು ನಾವು ವಿಷಾದದಿಂದ ಹೇಳುತ್ತಿದ್ದೇವೆ. ಈ ದೇಶದ ಮೇಲೆ ಮತ್ತು ಈ ಸಂಸ್ಥೆಯ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರಬಲ್ಲಂತಹ ಕೆಲವು ಪ್ರಕರಣಗಳ ವಿಚಾರಣೆಯನ್ನು ಈ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ‘ತಮಗೆ ಸರಿಕಂಡ’ ಪೀಠಗಳಿಗೆ ಹಂಚಿಕೆ ಮಾಡಿದ ನಿದರ್ಶನಗಳು ಇವೆ. ಆ ಪ್ರಕರಣಗಳನ್ನು ಹೀಗೆ ಹಂಚಿಕೆ ಮಾಡಿರುವುದಕ್ಕೆ ತಾರ್ಕಿಕ ಕಾರಣಗಳು ಇಲ್ಲ. ಯಾವುದೇ ಬೆಲೆ ತೆತ್ತಾದರೂ ಈ ರೀತಿ ಆಗದಂತೆ ತಡೆಯಬೇಕು.

ಈ ಸಂಸ್ಥೆಗೆ ಮುಜುಗರ ಆಗಬಾರದು ಎಂಬ ಕಾರಣಕ್ಕೆ ನಾವು ವಿವರಗಳನ್ನೆಲ್ಲ ಇಲ್ಲಿ ಉಲ್ಲೇಖಿಸುತ್ತಿಲ್ಲ. ಆದರೆ, ನಿಯಮಗಳನ್ನು ಮೀರಿರುವ ಕಾರಣ ಈ ಸಂಸ್ಥೆಯ ಹೆಸರಿಗೆ ಈಗಾಗಲೇ ಒಂದಿಷ್ಟು ಧಕ್ಕೆಯಾಗಿದೆ ಎಂಬುದನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕು.

ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿ ಇರಿಸಿಕೊಂಡು, ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆಯ ನಿಯಮಗಳನ್ನು (ಎಂಒಪಿ) ಅಂತಿಮಗೊಳಿಸುವ ವಿಚಾರದಲ್ಲಿ ಇನ್ನು ವಿಳಂಬ ಮಾಡಬಾರದು ಎಂದು ಆರ್‌.ಪಿ. ಲೂಥ್ರಾ ಮತ್ತು ಕೇಂದ್ರ ಸರ್ಕಾರದ ನಡುವಣ ಪ್ರಕರಣದಲ್ಲಿ 2017ರ ಅಕ್ಟೋಬರ್‌ 27ರಂದು ನೀಡಿದ ಆದೇಶದ ಬಗ್ಗೆ ಇಲ್ಲಿ ನಾವು ಹೇಳಬೇಕಿದೆ. ಸುಪ್ರೀಂ ಕೋರ್ಟ್‌ ಅಡ್ವೊಕೇಟ್ಸ್‌ ಆನ್‌ ರೆಕಾರ್ಡ್‌ ಮತ್ತು ಕೇಂದ್ರ ಸರ್ಕಾರದ ನಡುವಣ ಪ್ರಕರಣದಲ್ಲಿ ಸಂವಿಧಾನ ಪೀಠ ನೀಡಿರುವ ಆದೇಶದಲ್ಲಿ ಇದೇ ವಿಷಯದ ಬಗ್ಗೆ ಹೇಳಿರುವಾಗ, ಈ ವಿಷಯದ ಬಗ್ಗೆ ಬೇರೊಂದು ಪೀಠ ಪರಿಶೀಲನೆ ನಡೆಸಿದ್ದು ಏಕೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟದ ಕೆಲಸ.

ಅದು ಏನೇ ಇರಲಿ. ಸಂವಿಧಾನ ಪೀಠದ ಆದೇಶಕ್ಕೆ ಅನುಸಾರವಾಗಿ, ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿಯು (ಕೊಲಿಜಿಯಂ) ವಿಸ್ತೃತ ಚರ್ಚೆ ನಡೆಸಿ, ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆಯ ನಿಯಮಗಳನ್ನು (ಎಂಒಪಿ) ಅಂತಿಮಗೊಳಿಸಿ, ಅದನ್ನು ಅಂದಿನ ಸಿಜೆಐ ಕೇಂದ್ರ ಸರ್ಕಾರಕ್ಕೆ 2017ರ ಮಾರ್ಚ್‌ ತಿಂಗಳಲ್ಲಿ ರವಾನಿಸಿದರು. ಈ ವಿಚಾರವಾಗಿ ಕೇಂದ್ರ ಸರ್ಕಾರ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಹಾಗಾಗಿ, ಸಂವಿಧಾನ ಪೀಠ ನೀಡಿದ ತೀರ್ಮಾನಕ್ಕೆ ಅನುಗುಣವಾಗಿ ಕೊಲಿಜಿಯಂ ಸಿದ್ಧಪಡಿಸಿದ ಎಂಒಪಿಯನ್ನು ಸರ್ಕಾರ ಒಪ್ಪಿದೆ ಎನ್ನಬಹುದು. ಹಾಗಾಗಿ, ನೇಮಕಾತಿ ಪ್ರಕ್ರಿಯೆಯ ನಿಯಮಗಳಿಗೆ ಸಂಬಂಧಿಸಿದಂತೆ ತನ್ನ ಅನಿಸಿಕೆಗಳನ್ನು ಹೇಳಲು ಲೂಥ್ರಾ ಪ್ರಕರಣದ ವಿಚಾರಣೆ ನಡೆಸಿದ ಪೀಠಕ್ಕೆ ಅವಕಾಶ ಇರಲಿಲ್ಲ.

ನಿವೃತ್ತ ನ್ಯಾಯಮೂರ್ತಿ ಸಿ.ಎಸ್. ಕರ್ಣನ್ ಅವರಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಈ ಕೋರ್ಟ್‌ನ ಏಳು ನ್ಯಾಯಮೂರ್ತಿಗಳ ಪೀಠ 2017ರ ಜುಲೈ 4ರಂದು ನಡೆಸಿತು. ತಪ್ಪೆಸಗಿದ ನ್ಯಾಯಮೂರ್ತಿಯ ವಿರುದ್ಧ ಪ್ರಯೋಗಿಸಲು ವಾಗ್ದಂಡನೆ ಹೊರತಾಗಿ ಬೇರೊಂದು ಅಸ್ತ್ರ ಬೇಕು, ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆಯನ್ನು ಪುನರ್‌ ಪರಿಶೀಲನೆಗೆ ಒಳಪಡಿಸಬೇಕು ಎಂದು ಏಳು ಜನರ ಪೈಕಿ ಇಬ್ಬರು ನ್ಯಾಯಮೂರ್ತಿಗಳು ಹೇಳಿದ್ದರು. ಆದರೆ, ಎಂಒಪಿಗೆ ಸಂಬಂಧಿಸಿದಂತೆ ಯಾವುದೇ ನ್ಯಾಯಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿರಲಿಲ್ಲ.

ನೇಮಕ ಪ್ರಕ್ರಿಯೆಯ ನಿಯಮಾವಳಿಗಳಿಗೆ ಸಂಬಂಧಿಸಿದ ಯಾವುದೇ ವಿಚಾರವನ್ನು ಮುಖ್ಯ ನ್ಯಾಯಮೂರ್ತಿಗಳ ಸಭೆಯಲ್ಲಿ ಪ್ರಸ್ತಾಪಿಸಬೇಕು, ಅದರ ಬಗ್ಗೆ ಪೂರ್ಣ ಪೀಠ ಮಾತನಾಡಬೇಕು. ಇಂತಹ ಮುಖ್ಯ ವಿಚಾರವನ್ನು ಸಂವಿಧಾನ ಪೀಠ ಹೊರತುಪಡಿಸಿ ಬೇರೆ ಯಾರೂ ವಿಚಾರಣೆಗೆ ಕೈಗೆತ್ತಿಕೊಳ್ಳಬಾರದು.

ಈ ಮೇಲಿನ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಕೊಲಿಜಿಯಂನ ಇತರ ಸದಸ್ಯರ ಜೊತೆ ಪೂರ್ಣ ಪ್ರಮಾಣದಲ್ಲಿ ಚರ್ಚಿಸಿ, ಅಗತ್ಯ ಕಂಡುಬಂದರೆ ಸುಪ್ರೀಂ ಕೋರ್ಟ್‌ನ ಇತರ ನ್ಯಾಯಮೂರ್ತಿಗಳ ಜೊತೆ ಕೂಡ ಚರ್ಚಿಸಿ, ಪರಿಹಾರ ಕ್ರಮ ಕೈಗೊಳ್ಳುವ ಕರ್ತವ್ಯ ಸಿಜೆಐ ಅವರದ್ದಾಗಿದೆ.

ಆರ್.ಪಿ. ಲೂಥ್ರಾ ಪ್ರಕರಣದಲ್ಲಿ ನೀಡಿದ ಆದೇಶದಿಂದ ಉಂಟಾಗಿರುವ ಪರಿಸ್ಥಿತಿಯನ್ನು ನೀವು (ಸಿಜೆಐ) ಪರಿಶೀಲಿಸಿ, ಪರಿಹರಿಸಿದ ನಂತರ, ಇದೇ ರೀತಿಯ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಿರುವ ಪ್ರಕರಣಗಳ ಬಗ್ಗೆ ನಿಮಗೆ ನಾವು ತೀರಾ ಅಗತ್ಯ ಕಂಡುಬಂದರೆ ತಿಳಿಸುತ್ತೇವೆ.

ವಿಶ್ವಾಸದಿಂದ

ನ್ಯಾಯಮೂರ್ತಿಗಳಾದ ಜೆ. ಚಲಮೇಶ್ವರ್, ರಂಜನ್ ಗೊಗೋಯ್, ಮದನ್ ಬಿ. ಲೋಕೂರ್, ಕುರಿಯನ್ ಜೋಸೆಫ್

***

ಸುಪ್ರೀಂ ಕೋರ್ಟ್‌ ಪ್ರತಿಕ್ರಿಯೆಗಳು

ನ್ಯಾಯಮೂರ್ತಿಗಳ ನಡೆಯನ್ನು ಗಂಭೀರವಾಗಿ ಪರಿಗಣಿಸಬೇಕೇ ವಿನಾ ಅವರು ಮಾಡಿದ್ದರಲ್ಲಿ ತಪ್ಪು ಹುಡುಕುವ ಕೆಲಸ ಆಗಬಾರದು. ಪ್ರಧಾನಿ ಮುಂದೆ ಬಂದು ಸಿಜೆಐ ಮತ್ತು ನಾಲ್ಕು ಜನ ನ್ಯಾಯಮೂರ್ತಿಗಳ ಜೊತೆ ಸಮಾಲೋಚನೆ ನಡೆಸಬೇಕು. ಪರಿಸ್ಥಿತಿ ತಿಳಿಗೊಳಿಸಬೇಕು.

ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ, ರಾಜ್ಯಸಭಾ ಸದಸ್ಯ

***

ಇಂದು ಆಗಿರುವುದನ್ನು ಕಂಡು ನಾನು ನೊಂದಿದ್ದೇನೆ. ಇದು ಆಘಾತಕಾರಿ ಬೆಳವಣಿಗೆ. ಪತ್ರಿಕಾಗೋಷ್ಠಿ ನಡೆಸಿ ಸುಪ್ರೀಂ ಕೋರ್ಟ್‌ನ ಆಡಳಿತಾತ್ಮಕ ವಿಚಾರಗಳನ್ನು ನೋಡಿಕೊಳ್ಳಲು ಸಾಧ್ಯವೇ? ಯಾವುದು ಸರಿ, ಯಾವುದು ತಪ್ಪು ಎಂಬ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸುತ್ತೀರಾ?

ನಿವೃತ್ತ ನ್ಯಾಯಮೂರ್ತಿ ಆರ್.ಎಸ್. ಸೋಧಿ

***

ಇದು ಸ್ವಾಗತಾರ್ಹ, ದಿಟ್ಟ ಹೆಜ್ಜೆ. ಏನೋ ತಪ್ಪಾಗುತ್ತಿದೆ ಎಂಬುದನ್ನು ದೇಶಕ್ಕೆ ತಿಳಿಸಲು, ಅದನ್ನು ಸರಿಪಡಿಸಬೇಕಿದೆ ಎಂದು ಹೇಳಲು ಅವರು ಹಾಗೆ ಮಾಡಿರುವುದಾಗಿ ಹೇಳಿದ್ದಾರೆ.

ಇಂದಿರಾ ಜೈಸಿಂಗ್,  ಹಿರಿಯ ವಕೀಲೆ

***

ಈ ನಾಲ್ವರು ನ್ಯಾಯಮೂರ್ತಿಗಳು ಜವಾಬ್ದಾರಿಯುತ ವ್ಯಕ್ತಿಗಳು. ಅವರು ಹೀಗೆ ಮಾಡಿದ್ದಾರೆ ಎಂದಾದರೆ ಪರಿಸ್ಥಿತಿ ಕೈಮೀರಿದೆ ಎಂಬುದು ಖಚಿತ. ಪ್ರಕರಣಗಳ ವಿಚಾರಣೆಯನ್ನು ಹಂಚಿಕೆ ಮಾಡುವ ವಿಚಾರದಲ್ಲಿ ಸಿಜೆಐ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಇವರು ಹೇಳಿದ್ದಾರೆ.

ಪ್ರಶಾಂತ್ ಭೂಷಣ್, ವಕೀಲ

***

ಅವರಿಗೆ ಬೇರೆ ಯಾವ ಮಾರ್ಗವೂ ಉಳಿದಿರಲಿಲ್ಲ. ಅವರ ಮುಖದಲ್ಲಿ ನೋವು ಕಾಣಿಸುತ್ತಿತ್ತು. ಇಡೀ ವಿಚಾರ ನ್ಯಾಯಾಂಗದ ಸಭ್ಯತೆಗೆ ಸಂಬಂಧಿಸಿದ್ದು. ಅವರು ಎತ್ತಿರುವ ಪ್ರಶ್ನೆ ಸಹಜ ನ್ಯಾಯಕ್ಕೆ ಸಂಬಂಧಿಸಿದ್ದು. ಜನಸಾಮಾನ್ಯರಿಗೆ ಅನ್ವಯವಾಗುವ ಕಾನೂನನ್ನು ನ್ಯಾಯಮೂರ್ತಿಗಳಿಗೆ ಇನ್ನಷ್ಟು ಕಟ್ಟುನಿಟ್ಟಾಗಿ ಅನ್ವಯಿಸಬೇಕಾಗುತ್ತದೆ. ಏಕೆಂದರೆ ಅವರು ಯಾವಾಗಲೂ ಅನುಮಾನಗಳಿಗೆ ಈಡಾಗಬಾರದು.

ಕೆ.ಟಿ.ಎಸ್. ತುಳಸಿ, ಹಿರಿಯ ವಕೀಲ

***

ಜೆ.ಚಲಮೇಶ್ವರ್

ಸುಪ್ರೀಂ ಕೋರ್ಟ್‌ನಲ್ಲಿ ಸೇವೆ:

2011ರ ಅಕ್ಟೋಬರ್ 10–2018ರ ಜೂನ್ 22

* ಸುಪ್ರೀಂ ಕೋರ್ಟ್‌ನ ಎರಡನೇ ಹಿರಿಯ ನ್ಯಾಯಮೂರ್ತಿ

* 1995ರಲ್ಲಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ನೇಮಕ, 1997ರಲ್ಲಿ ಆಂಧ್ರಪ್ರದೇಶ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕ

* ಗುವಾಹಟಿ ಮತ್ತು ಕೇರಳ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ

* ಕೊಲಿಜಿಯಂ ಪದ್ಧತಿಯಲ್ಲಿ ಪಾರದರ್ಶಕತೆಗಾಗಿ ಆಗ್ರಹ

* ನ್ಯಾಯಾಂಗ ನೇಮಕಾತಿ ಆಯೋಗದ ಪರವಾಗಿ ಆದೇಶ ನೀಡಿದ ಏಕೈಕ ನ್ಯಾಯಮೂರ್ತಿ

ರಂಜನ್ ಗೊಗೋಯ್‌

ಸುಪ್ರೀಂ ಕೋರ್ಟ್‌ನಲ್ಲಿ ಸೇವೆ: 2012ರ ಏಪ್ರಿಲ್ 23–2019ರ ನವೆಂಬರ್ 17

* ಸುಪ್ರೀಂ ಕೋರ್ಟ್‌ನ ಮೂರನೇ ಹಿರಿಯ ನ್ಯಾಯಮೂರ್ತಿ

* ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನಿವೃತ್ತಿ ನಂತರ ಅತ್ಯಂತ ಹಿರಿಯ ನ್ಯಾಯಮೂರ್ತಿಯಾಗಲಿದ್ದಾರೆ. ಮುಂದಿನ ಮುಖ್ಯ ನ್ಯಾಯಮೂರ್ತಿಯಾಗುವ ಸಾಧ್ಯತೆ

* ಮುಖ್ಯನ್ಯಾಯಮೂರ್ತಿಯಾದರೆ ಆ ಹುದ್ದೆಗೆ ಏರಿದ ಈಶಾನ್ಯ ಭಾರತದ ಮೊದಲ ವ್ಯಕ್ತಿ ಎನಿಸಲಿದ್ದಾರೆ

* ಪಂಜಾಬ್–ಹರಿಯಾಣ ಹೈಕೋರ್ಟ್‌ಗಳಲ್ಲಿ ನ್ಯಾಯಮೂರ್ತಿ
ಯಾಗಿ, ಮುಖ್ಯನ್ಯಾಯಮೂರ್ತಿಯಾಗಿ ಸೇವೆ

ಮದನ್ ಬಿ.ಲೋಕೂರ್

ಸುಪ್ರೀಂ ಕೋರ್ಟ್‌ನಲ್ಲಿ ಸೇವೆ:

2012ರ ಜೂನ್ 4–2018ರ ಡಿಸೆಂಬರ್ 30

* ಸುಪ್ರೀಂ ಕೋರ್ಟ್‌ನ ನಾಲ್ಕನೇ ಹಿರಿಯ ನ್ಯಾಯಮೂರ್ತಿ

* 1977ರಲ್ಲಿ ವಕೀಲರಾಗಿ ಸೇವೆ ಆರಂಭ. ದೆಹಲಿ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ಗಳಲ್ಲಿ ವಕೀಲರಾಗಿ ಸೇವೆ, ನ್ಯಾಯಮೂರ್ತಿಯಾಗಿ ದೆಹಲಿ ಹೈಕೋರ್ಟ್‌, ಮುಖ್ಯನ್ಯಾಯಮೂರ್ತಿಯಾಗಿ ಗುವಾಹಟಿ ಹೈಕೋರ್ಟ್ ಮತ್ತು ಆಂಧ್ರ ಪ್ರದೇಶ ಹೈಕೋರ್ಟ್‌ಗಳಲ್ಲಿ ಸೇವೆ

* 1998ರಲ್ಲಿ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕ

ಕುರಿಯನ್ ಜೋಸೆಫ್

ಸುಪ್ರೀಂ ಕೋರ್ಟ್‌ನಲ್ಲಿ ಸೇವೆ: 2013ರ ಮಾರ್ಚ್ 8–2018ರ ನವೆಂಬರ್ 29

* ಸುಪ್ರೀಂ ಕೋರ್ಟ್‌ನ ಐದನೇ ಹಿರಿಯ ನ್ಯಾಯಮೂರ್ತಿ

* ಕೇರಳ ವಿಶ್ವವಿದ್ಯಾಲಯದ ವಿದ್ಯಾರ್ಥಿ ಚಳವಳಿಯ ನಾಯಕ, ವಿದ್ಯಾರ್ಥಿ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ

* 1979ರಲ್ಲಿ ಕೇರಳ ಹೈಕೋರ್ಟ್‌ನಲ್ಲಿ ವಕೀಲ ವೃತ್ತಿ ಆರಂಭ, 2000ರಲ್ಲಿ ನ್ಯಾಯಾಧೀಶರಾಗಿ ನೇಮಕ

* ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗುವ ಮುನ್ನ ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿಯಾಗಿ ಸೇವೆ

* ತ್ರಿವಳಿ ತಲಾಖ್ ವಿರುದ್ಧ ತೀರ್ಪು ನೀಡಿದ ನ್ಯಾಯಮೂರ್ತಿಗಳಲ್ಲಿ ಒಬ್ಬರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT