ಬೆಂಗಳೂರು: ‘ಬಾಲ್ಯದಲ್ಲಿ ವಿವೇಕಾನಂದರ ಆದರ್ಶ ಅಳವಡಿಸಿಕೊಂಡರೆ ಮಾತ್ರ ಉತ್ತಮ ಪ್ರಜೆಗಳಾಗಲು ಸಾಧ್ಯ’ ಎಂದು ಯಲಹಂಕದ ರಾಮಕೃಷ್ಣ ವಿವೇಕಾನಂದವೇದಾಂತ ಆಶ್ರಮದ ಅಭಯಾನಂದ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕೆ.ಆರ್.ಪುರ ಸಮೀಪದ ವಿಜಿನಾಪುರದ ಶ್ರೀಕುಮಾರನ್ ಆಂಗ್ಲ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದೇ ವೇಳೆ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ವಿದ್ಯಾರ್ಥಿಗಳ ಸಂಘದ ವತಿಯಿಂದ ನಿರ್ಮಿಸಿದ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.
‘ಶಾಲೆಯಲ್ಲಿ ವಿವೇಕಾನಂದರ ಪ್ರತಿಮೆ ಅನಾವರಣ ಮಾಡಿರುವುದು ಕ್ರಿಯಾಶೀಲವಾದ ಕೆಲಸ. ‘ಏಳಿ ಎದ್ದೇಳಿ ಗುರಿ ಮುಟ್ಟುವವರೆಗೂ ನಿಲ್ಲ
ದಿರಿ..’ ಎಂಬ ವಿವೇಕವಾಣಿಯನ್ನು ವಿದ್ಯಾರ್ಥಿಗಳು ಚಾಚುತಪ್ಪದೆ ಪಾಲಿಸಬೇಕು’ ಎಂದರು. ವಿದ್ಯಾರ್ಥಿಗಳಿಗೆ ಭಾರತಮಾತೆ ಸ್ಟಿಕ್ಕರ್ ವಿತರಿಸಲಾಯಿತು.
ವಿವೇಕಾನಂದರ ಕಂಚಿನ ಪ್ರತಿಮೆ ಅನಾವರಣ : ಬಿಬಿಎಂಪಿ ವತಿಯಿಂದ ಯಡಿಯೂರು ವಾರ್ಡ್ನ ಯಡಿಯೂರು ಕೆರೆಯ ಉದ್ಯಾನದಲ್ಲಿ ಸ್ಥಾಪಿಸಿರುವ ಸ್ವಾಮಿ ವಿವೇಕಾನಂದ ಅವರ 19 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಕೇಂದ್ರ ಸಚಿವ ಅನಂತಕುಮಾರ್ ಹಾಗೂ ಶಾಸಕ ಆರ್.ಅಶೋಕ್ ಅವರು ಶುಕ್ರವಾರ ಅನಾವರಣ ಮಾಡಿದರು.
ಈ ಪ್ರತಿಮೆಯನ್ನು 12 ಅಡಿ ಎತ್ತರದ ಪೀಠದ ಮೇಲೆ ಸ್ಥಾಪಿಸಲಾಗಿದೆ. ಪ್ರತಿಮೆ ಸ್ಥಾಪನೆಗೆ ₹70 ಲಕ್ಷ ವೆಚ್ಚವಾಗಿದೆ. ವಿವೇಕಾನಂದರ 50 ವಿವೇಕವಾಣಿಗಳನ್ನು ಒಳಗೊಂಡ ಫಲಕಗಳನ್ನು ಅಳವಡಿಸಲಾಗಿದೆ.
ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದ ಮಂಗಲ್ ಪಾಂಡೆ, ತಾತ್ಯಾ ಟೋಪೆ, ಭಗತ್ ಸಿಂಗ್, ಚಂದ್ರಶೇಖರ ಆಜಾದ್, ಸುಖದೇವ್, ರಾಜಗುರು ಹಾಗೂ ವೀರ ಸಿಂಧೂರ ಲಕ್ಷ್ಮಣ ಅವರ ಪುತ್ಥಳಿಗಳನ್ನು ಉದ್ಯಾನದಲ್ಲಿ ಅನಾವರಣ ಮಾಡಲಾಯಿತು.
ವಾಯುವಿಹಾರಿಗಳಿಗಾಗಿ ಮುಕ್ತ ವ್ಯಾಯಾಮ ಶಾಲೆ ಹಾಗೂ ಚಿಣ್ಣರಿಗಾಗಿ ‘ಮಕ್ಕಳ ಆಟದ ಉದ್ಯಾನ’ ನಿರ್ಮಿಸಲಾಗಿದೆ. ಇದರ ಜತೆಗೆ ವಾಯುವಿಹಾರ ಮಾರ್ಗವನ್ನೂ ಅಭಿವೃದ್ಧಿಪಡಿಸಲಾಗಿದೆ.
ಈ ಕೆರೆಯು ಪಕ್ಷಿಧಾಮವಾಗಿ ಖ್ಯಾತಿ ಪಡೆದಿದೆ. 129 ಪ್ರಭೇದದ ಪಕ್ಷಿಗಳು ಸಂತಾನಾಭಿವೃದ್ಧಿಗೆಂದು ಇಲ್ಲಿಗೆ ವಲಸೆ ಬರುತ್ತವೆ. ವಿವೇಕಾನಂದರ ಪ್ರತಿಮೆ ಸ್ಥಾಪನೆಯಿಂದಾಗಿ ಕೆರೆಯು ಪ್ರೇಕ್ಷಣೀಯ ಸ್ಥಳವಾಗಿ ಪರಿವರ್ತನೆಯಾಗಲಿದೆ ಎಂದು ಪಾಲಿಕೆ ಸದಸ್ಯೆ ಪೂರ್ಣಿಮಾ ರಮೇಶ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.