ತಿಪಟೂರು: ನಗರದ ದೀಕ್ಷಾ ಹೆರಿಟೇಜ್ ಶಾಲೆಯಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಶಾಲೆಯ ಆವರಣದಲ್ಲಿ 24x24 ಅಡಿ ಅಗಲದ 120 ಕೆ.ಜಿ ವಿವಿಧ ಬಣ್ಣ ಬಳಸಿದ ರಂಗೋಲಿಯನ್ನು ಸೃಷ್ಟಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜೆಡಿಎಸ್ ಮುಂಖಂಡ ಲೋಕೇಶ್ವರ್ ಮಾತನಾಡಿ, ವೈಮನಸ್ಸುಗಳನ್ನು ಮರೆತು ಹೊಸ ಪಥದತ್ತ ಸಾಗುವುದೇ ಸಂಕ್ರಾಂತಿ ಹಬ್ಬದ ವಿಶೇಷ.
ಸೂರ್ಯದೇವ ತನ್ನ ಪಥ ಬದಲಾವಣೆ ಮಾಡುವಂತೆ ರೈತರು ವರ್ಷಪೂರ್ತಿ ಮೈಮುರಿದು ದುಡಿದು ರಾಶಿಕಣದಲ್ಲಿ ಮಂದಹಾಸ ಮೂಡುವ ಸಡಗರವೇ ಸಂಕ್ರಾಂತಿ ಹಬ್ಬವಾಗಿದೆ. ರೈತರು ದವಸ ಧಾನ್ಯಗಳನ್ನು ಕಣದಲ್ಲಿ ಪೂಜೆ ಮಾಡುತ್ತಾ ಸಂಕ್ರಾಂತಿ ಆಚರಣೆ ಮಾಡಿದರೆ ದೀಕ್ಷಾ ಹೆರಿಟೇಜ್ ಶಾಲೆಯಲ್ಲಿ 120 ಕೆ.ಜಿ ವಿವಿಧ ಬಣ್ಣಗಳನ್ನು ಬಳಸಿಕೊಂಡು ಬೃಹತ್ ರಂಗೋಲಿಯನ್ನು ಹಾಕಿ ಸಂಕ್ರಾಂತಿಯನ್ನು ಆಚರಿಸಿದ್ದಾರೆ. ಜಾನಪದ ಕಲೆಯನ್ನು ಕಾಪಾಡಿದ್ದಾರೆ ಎಂದರು.
ದೀಕ್ಷಾ ಹೆರಿಟೇಜ್ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ನವೀನ್ಯಾದವ್ ಮಾತನಾಡಿ, ಆಧುನಿಕ ಯುಗದಲ್ಲಿ ಯುವ ಜನತೆ ಪ್ಯಾಷನ್ ಲೋಕಕ್ಕೆ ಜಾರುತ್ತಿದ್ದು, ಪ್ರಾಚೀನ ಕಾಲದ ನಮ್ಮ ಸಂಸ್ಕೃತಿಗಳನ್ನು ಉಳಿಸಿ, ಬೆಳಸುವ ಕರ್ತವ್ಯ ನಮ್ಮದಾಗಿದೆ ಎಂದರು.
ಪೂಜೆಯ ನಂತರ ಸಂಸ್ಥೆಯ ಎಲ್ಲ ಮಕ್ಕಳಿಗೂ ಹಾಗೂ ಪೋಷಕರಿಗೂ ಎಳ್ಳು ಮತ್ತು ಕಬ್ಬುನನ್ನು ಹಂಚಲಾಯಿತು. ತಹಶೀಲ್ದಾರ್ ಡಾ.ವಿ ಮಂಜುನಾಥ್, ಬಿ.ಆರ್.ಸಿ ಯೋಗ ನರಸಿಂಹಮೂರ್ತಿ ಇದ್ದರು.