ರಬಕವಿ ಬನಹಟ್ಟಿ: ಗದಗಿನ ತೋಂಟದಾರ್ಯ ಸ್ವಾಮೀಜಿಯವರನ್ನು ಬಹಳಷ್ಟು ಜನರು ಪುಸ್ತಕದ ಸ್ವಾಮೀಜಿ ಎಂದು ಕರೆದರೆ, ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಸ್ವಾಮೀಜಿಯವರನ್ನು ರಬಕವಿ ಬನಹಟ್ಟಿಯ ಪುಸ್ತಕದ ಸ್ವಾಮೀಜಿ ಎಂದು ಕರೆಯಲಾಗುತ್ತದೆ.
2011ರಲ್ಲಿ ರಬಕವಿ ಬ್ರಹ್ಮಾನಂದ ಆಶ್ರಮದ ಪೀಠಾಧಿಕಾರಿಯಾದ ಗುರುಸಿದ್ಧೇಶ್ವರ ಸ್ವಾಮೀಜಿ, ಪ್ರತಿ ತಿಂಗಳ ಅಮವಾಸ್ಯೆಯಂದು ಅನುಭಾವದಂಗಳ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ. ಇದೇ 16ರಂದು 59ನೇ ಅನುಭಾವದಂಗಳ ಕಾರ್ಯಕ್ರಮ ನಡೆಯದೆ.
ನಾಡಿನ ಅನೇಕ ಸಾಹಿತಿ, ವಿಜ್ಞಾನಿ, ಸ್ವಾಮೀಜಿಗಳು ಹಾಗೂ ಸಾಧಕರನ್ನು ಕರೆಯಿಸಿ ಅವರಿಂದ ಭಾಷಣ ಮತ್ತು ಪ್ರವಚನ ಹಮ್ಮಿಕೊಳ್ಳುವ ಮೂಲಕ ಕಾರ್ಯ ಅತ್ಯಂತ ಯಶಸ್ವಿಯಾಗಿದೆ. ಸ್ವಾಮೀಜಿ ಕೈಗೊಂಡ ಮತ್ತೊಂದು ಕಾರ್ಯವೆಂದರೆ ಅದು ಪುಸ್ತಕ ಪ್ರಕಟಣೆ.
ಬ್ರಹ್ಮಾನಂದರ 150ನೇ ಜಯಂತ್ಯುತ್ಸವ ಸಂದರ್ಭದಲ್ಲಿ 15 ದಿನಗಳ ಒಟ್ಟು ಕಾರ್ಯಕ್ರಮದಲ್ಲಿ ಮಂಡ್ಯದ ಡಾ.ಪ್ರದೀಪಕುಮಾತ ಹೆಬ್ರಿ ಅವರ ‘ಬ್ರಹ್ಮಾನಂದ ಗುರುದೇವರು’, ಗಿರೀಶ ಮುತ್ತೂರ ಅವರ ‘ಮಾತಿಗೊಂದು ಹಾಡು, ಸ್ವತಃ ಗುರುಸಿದ್ಧೇಶ್ವರ ಸ್ವಾಮೀಜಿ ಬರೆದ ‘ಯದ್ಭಾವಂ ತದ್ಭವತಿ’, ‘ಹೀಗಿರಲಿ ನಮ್ಮ ಬದುಕು’ ಮತ್ತು ಅವರೇ ಸಂಪಾದಿಸಿದ ‘ಅನುಭಾವದಂಗಳ’ ಸೇರಿದಂತೆ ಒಟ್ಟು ಐದು ಪುಸ್ತಕಗಳು ಬಿಡುಗಡೆಗೊಂಡಿವೆ.
ಇದುವರೆಗೆ ಮಠದ ಆಶ್ರಯದಲ್ಲಿ ‘ಬ್ರಹ್ಮಾನಂದ ಪ್ರಭೆ’ ಸ್ವರಣ ಸಂಚಿಕೆ, ‘ಗುರು ಕರುಣ ತ್ರಿವಿಧಿ’, ‘ಮಹಾಕಾವ್ಯ ದರ್ಪಣ’, ‘ಹಾಡಿದೊಡೆ ಎನ್ನೊಡೆಯನ ಹಾಡುವೆ’, ಬಿ.ಆರ್.ಪೊಲೀಸ್ಪಾಟೀಲ ರಚಿಸಿದ ‘ಸದ್ಗುರು ಬ್ರಹ್ಮಾನಂದರು’ ಮತ್ತು ‘ಸದ್ಗುರು ಬ್ರಹ್ಮಾನಂದ ಗುರು ಉಪದೇಶಗಳು’ ಹೀಗೆ ಹತ್ತಕ್ಕೂ ಹೆಚ್ಚು ವೈವಿಧ್ಯಮಯವಾದ ಪುಸ್ತಕಗಳು ಪ್ರಕಟಗೊಳಿಸಿ ಜನರನ್ನು ಓದುವಂತೆ ಮಾಡಿದ್ದಾರೆ. ಜೊತೆಗೆ ಗುರುದೇವ ‘ಬ್ರಹ್ಮಾನಂದ ಸುಪ್ರಭಾತ’ ಮತ್ತು ಭಕ್ತಿಗೀತೆಗಳು ಮತ್ತು ‘ಅನುಭಾವದಡಿಗೆ’ ಎರಡು ಸಿಡಿಗಳನ್ನು ಮಠದಿಂದ ಹೊರ ತರಲಾಗಿದೆ.
ಸ್ವಾಮೀಜಿ aವರು ಈ ಭಾಗದಲ್ಲಿ 12ನೇ ಶತಮಾನದ ಬಸವಣ್ಣನವರ ಕಾಯಕ, ದಾಸೋಹ, ಪ್ರಸಾದ, ಶಿಕ್ಷಣ ಹೀಗೆ ಕಾರ್ಯಕ್ರಗಳನ್ನು ರೂಪಿಸುತ್ತಿದ್ದಾರೆ. ಸ್ಥಳೀಯ ಲೇಖಕರನ್ನು ಬರವಣೆಗೆ ಪ್ರೋತ್ಸಾಹಿಸುತ್ತಿದ್ದಾರೆ.
ಇನ್ನೂ ವ್ಯಸನ ಮುಕ್ತ ಸಮಾಜದ ನಿರ್ಮಾಣಕ್ಕಾಗಿ ‘ಬ್ರಹ್ಮಾನಂದರ ನಡಿಗೆ ಮನೆ ಮನೆಗೆ’ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಯೋಗ, ಧ್ಯಾನ, ರಕ್ತದಾನ, ಪರಿಸರ ರಕ್ಷಣೆಯಂತಹ ಹತ್ತಾರು ಕಾರ್ಯಕ್ರಮಗಳನ್ನು ಮಠದ ಮೂಲಕ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಗುರುಸಿದ್ಧೇಶ್ವರ ಸ್ವಾಮೀಜಿಯವರಿಂದಾಗಿ ರಬಕವಿಯ ಬ್ರಹ್ಮಾನಂದ ಮಠ ಇಂದು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕವಾಗಿ ಶ್ರೀಮಂತಗೊಂಡಿದೆ.
ವಿಶ್ವಜ ಕಾಡದೇವರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.