ನವದೆಹಲಿ: ಹಜ್ ಯಾತ್ರೆಗೆ ನೀಡುವ ಸಹಾಯಧನವನ್ನು (ಸಬ್ಸಿಡಿ) ಈ ವರ್ಷದಿಂದ ರದ್ದುಗೊಳಿಸಲಾಗಿದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಮಂಗಳವಾರ ಹೇಳಿದರು.
‘ಸಹಾಯಧನ ನೀಡದಿದ್ದರೂ ಭಾರತದಿಂದ ಈ ವರ್ಷ 1.75 ಲಕ್ಷ ಮುಸ್ಲಿಮರು ಹಜ್ ಯಾತ್ರೆ ಕೈಗೊಳ್ಳಲಿದ್ದಾರೆ. ಇದು ಈವರೆಗಿನ ದಾಖಲೆ’ ಎಂದು ಅವರು ತಿಳಿಸಿದರು.
‘ಭಾರತದಿಂದ ಹಡಗುಗಳ ಮೂಲಕ ಬರುವ ಹಜ್ ಯಾತ್ರಿಕರಿಗೂ ಪ್ರವೇಶಕ್ಕೆ ಅವಕಾಶ ನೀಡಲು ಸೌದಿ ಅರೇಬಿಯಾ ಸರ್ಕಾರ ಒಪ್ಪಿಕೊಂಡಿದೆ’ ಎಂದೂ ಅವರು ಹೇಳಿದರು.
‘ಹಜ್ ಯಾತ್ರೆಗೆ ಸಹಾಯಧನ ನೀಡುವುದನ್ನು ನಿಷೇಧಿಸಬೇಕು ಎಂದು ಸುಪ್ರೀಂ ಕೋರ್ಟ್ನ ಸಂವಿಧಾನ ಪೀಠವು 2012ರಲ್ಲಿ ನಿರ್ದೇಶಿಸಿತ್ತು. ಅದರಂತೆ, ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಅವರು ಹೇಳಿದರು.
ಸಹಾಯಧನಕ್ಕೆ ಬಳಸುತ್ತಿದ್ದ ಮೊತ್ತವನ್ನು ಅಲ್ಪಸಂಖ್ಯಾತ ಬಾಲಕಿಯರ ಶಿಕ್ಷಣ ಮತ್ತು ಮಹಿಳೆಯರ ಸಬಲೀಕರಣಕ್ಕೆ ಬಳಸಲಾಗುವುದು ಎಂದು ಸಚಿವರು ತಿಳಿಸಿದ್ದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿವೆ.