ಕುಷ್ಟಗಿ: ಕೊಪ್ಪಳ ಏತ ನೀರಾವರಿಯ ತ್ವರಿತ ಅನುಷ್ಠಾನಕ್ಕೆ ಮುಂದಾಗಿಲ್ಲ ಎಂದು ಆರೋಪಿಸಿ ಬಿಜೆಪಿ ಎರಡನೇ ಬಾರಿಗೆ ರಾಜ್ಯ ಸರ್ಕಾರದ ವಿರುದ್ಧ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, ಪಾದಯಾತ್ರೆ ಮತ್ತು ಸಮಾವೇಶಕ್ಕೆ ಪಟ್ಟಣ ಸಜ್ಜುಗೊಂಡಿದೆ.
ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ, ಮುಖ್ಯ ರಸ್ತೆ ಇಕ್ಕೆಲಗಳಲ್ಲಿ ಬಿಜೆಪಿಯ ಯುವ ಮೋರ್ಚಾದ ಬೃಹತ್ ಬ್ಯಾನರ್ಗಳು, ಪಕ್ಷದ ಗಣ್ಯರನ್ನು ಸ್ವಾಗತಿಸುವ ಫ್ಲೆಕ್ಸ್ಗಳು, ಲಕ್ಷಾಂತರ ಬಂಟಿಂಗ್ಸ್ಗಳು, ಪಕ್ಷದ ಬಾವುಟ, ಕಟೌಟ್ಸ್ಗಳು ರಾರಾಜಿಸುತ್ತಿವೆ.
ಕೊಪ್ಪಳ ಏತ ನೀರಾವರಿಗೆ ಸಂಬಂಧಿಸಿದಂತೆ ತಾಲ್ಲೂಕಿನ ಕಲಾಲಬಂಡಿ ಗ್ರಾಮದ ಹೊರ ವಲಯದಲ್ಲಿರುವ ಮುಖ್ಯ ಸ್ಥಾವರ (ಡೆಲೆವರಿ ಚೇಂಬರ್) ಸ್ಥಳದಿಂದ ಬುಧವಾರ (ಜ 17) ಬಿಜೆಪಿ ಪಾದಯಾತ್ರೆ ಆರಂಭಗೊಳಲಿದೆ. ಬೆಳಿಗ್ಗೆ 9 ಗಂಟೆಗೆ ರಾಜ್ಯ ಯುವ ಘಟಕದ ಅಧ್ಯಕ್ಷರಾಗಿರುವ ಸಂಸದ ಪ್ರತಾಪ್ ಸಿಂಹ ಚಾಲನೆ ನೀಡಲಿದ್ದಾರೆ.