ಬೆಂಗಳೂರು: ಸಬ್ ಅರ್ಬನ್ ರೈಲ್ವೆ ಯೋಜನೆಯ ಒಟ್ಟು ವೆಚ್ಚದಲ್ಲಿ ಶೇ 50 ರಷ್ಟನ್ನು ಭರಿಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ರೈಲ್ವೆ ಸಚಿವ ಪೀಯೂಷ್ ಗೋಯಲ್ ತಿಳಿಸಿದ್ದಾರೆ.
ಆದರೆ ಇದಕ್ಕೆ ನಗರದ ರೈಲ್ವೆ ಜಾಗದಲ್ಲಿ 5 ಫ್ಲೋರ್ ಸ್ಪೇಸ್ ಇಂಡೆಕ್ಸ್ಗೆ (ಎಫ್ಎಸ್ಐ) ನೀಡಬೇಕು ಎಂದು ಅವರು ಷರತ್ತು ವಿಧಿಸಿದ್ದಾರೆ.
ಗುರುವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಕೇಂದ್ರ ಸಚಿವ ಅನಂತಕುಮಾರ ಹಾಗೂ ಸಂಸದ ಪಿ.ಸಿ.ಮೋಹನ್ ಜೊತೆ ಧಿಡೀರ್ ಭೇಟಿ ನೀಡಿದ ಅವರು ಬಳಿಕ ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
‘ನಗರದಲ್ಲಿ 108 ಕಿ.ಮೀ ಉದ್ದದ ಸಬ್ ಅರ್ಬನ್ ರೈಲು ಮಾರ್ಗ ನಿರ್ಮಿಸಬಹುದು ಎಂದು ರೈಟ್ ಸಂಸ್ಥೆಯ ಅಧ್ಯಯನ ವರದಿ ತಿಳಿಸಿದೆ. ಯಶವಂತಪುರದಿಂದ ಎತ್ತರಿಸಿದ ಮಾರ್ಗ ನಿರ್ಮಿಸಲು ಅನುಮತಿ ನೀಡಬೇಕು ಎಂಬ ಪ್ರಸ್ತಾವವನ್ನು ರೈಲ್ವೆ ಮಂಡಳಿ ಹಾಗೂ ಹಣಕಾಸು ಇಲಾಖೆಯ ಮುಂದಿಡುತ್ತೇನೆ’ ಎಂದು ಗೋಯಲ್ ತಿಳಿಸಿದರು.
ಸಬ್ ಅರ್ಬನ್ ರೈಲು ಯೋಜನೆಯ ಶೇ 20 ರಷ್ಟು ಮೊತ್ತವನ್ನು ಮಾತ್ರ ಭರಿಸಲು ಸಿದ್ಧ ಎಂದು ರೈಲ್ವೆ ಇಲಾಖೆ ಹೇಳಿತ್ತು. ಶೇ 50ರಷ್ಟು ವೆಚ್ಚವನ್ನು ಕೇಂದ್ರವೇ ಭರಿಸಬೇಕು ಎಂದು ರಾಜ್ಯ ಸರ್ಕಾರ ಒತ್ತಾಯಿಸಿತ್ತು.
ನಿರ್ದಿಷ್ಟ ಜಾಗದಲ್ಲಿರುವ ಮೂಲಸೌಕರ್ಯದ ಆಧಾರದಲ್ಲಿ, ಅಲ್ಲಿ ಜಾಗ ಮತ್ತು ಕಟ್ಟಡದ ವಿಸ್ತೀರ್ಣದ ಅನುಪಾತ ಎಷ್ಟು ಇರಬೇಕು ಎಂಬುದನ್ನು ಸ್ಥಳೀಯ ಸಂಸ್ಥೆ ನಿರ್ಧರಿಸುತ್ತದೆ. ಇದನ್ನು ಫ್ಲೋರ್ ಏರಿಯಾ ರೇಷಿಯೋ ಎಂದೂ ಕರೆಯುತ್ತಾರೆ.
₹ 12,000 ಕೋಟಿ ವೆಚ್ಚದ ಉಪನಗರ ರೈಲು ಯೋಜನೆಗೆ ಕೇಂದ್ರ ಮಂಜೂರಾತಿ ನೀಡಿದೆ ಎಂದು ಸಚಿವ ಅನಂತ ಕುಮಾರ್ ಟ್ವೀಟ್ ಮಾಡಿದ್ದಾರೆ.