ಜಮ್ಮು : ಜಮ್ಮು ಮತ್ತು ಸಾಂಬಾ ಜಿಲ್ಲೆಗಳ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಎರಡನೇ ದಿನವೂ ದಾಳಿ ಮುಂದುವರಿಸಿದೆ.
ನಾಗರಿಕರ ವಸತಿ ಪ್ರದೇಶ ಮತ್ತು ಗಡಿಠಾಣೆಗಳ ಮೇಲೆ ನಡೆಸಿದ ಭಾರಿ ಪ್ರಮಾಣದ ಷೆಲ್ ದಾಳಿಯಲ್ಲಿ ಒಬ್ಬ ಯೋಧ ಮತ್ತು ಮೂವರು
ನಾಗರಿಕರು ಮೃತಪಟ್ಟಿದ್ದಾರೆ.
ಮೂರು ಮಂದಿ ಗಾಯಗೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಗಡಿ ಭದ್ರತಾ ಪಡೆಗಳು ತಕ್ಕ ಉತ್ತರ ನೀಡಿವೆ.
ದಾಳಿಯಲ್ಲಿ ಗಾಯಗೊಂಡಿದ್ದ ಬಿಎಸ್ಎಫ್ ಯೋಧ ಜಗ್ಪಾಲ್ ಸಿಂಗ್ ಆನಂತರ ಮೃತಪಟ್ಟರು. ಗಡಿಯಲ್ಲಿ ಪರಿಸ್ಥಿತಿ ತುಂಬ ಉದ್ವಿಗ್ನ
ವಾಗಿದೆ.
ಹೀಗಾಗಿ ಗಡಿಯಿಂದ 5 ಕಿ.ಮೀ ವ್ಯಾಪ್ತಿಯಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ತಕ್ಕ ಉತ್ತರ: ‘ಗಡಿಯಲ್ಲಿಪದೇಪದೇ ದಾಳಿ ಮಾಡುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಲು ಭಾರತದ ಪಡೆಗಳು ಸರ್ವಸನ್ನದ್ಧವಾಗಿವೆ.
ಏನು ಮಾಡಬೇಕು ಎಂಬುದು ಭಾರತದ ಯೋಧರಿಗೆ ತಿಳಿದಿದೆ’ ಎಂದು ಕೇಂದ್ರ ಸಚಿವ ಸುಭಾಷ್ ಭಾರ್ಮೆ ಹೇಳಿದ್ದಾರೆ.
ಭಾರತದ ವಿರೋಧ: (ನವದೆಹಲಿ ವರದಿ): ನಿರಂತರ ಕದನ ವಿರಾಮ ಉಲ್ಲಂಘನೆ ಮತ್ತು ನಾಗರಿಕರನ್ನು ಗುರಿಯಾಗಿರಿಸಿದ ಪಾಕ್ ದಾಳಿಯನ್ನು ಖಂಡಿಸಿರುವ ಭಾರತ, ಪಾಕಿಸ್ತಾನದ ಉಪ ಹೈ ಕಮಿಷನರ್ ಸೈಯದ್ ಐದರ್ ಷಾ ಅವರನ್ನು ಕರೆಸಿಕೊಂಡು ತೀವ್ರ ವಿರೋಧ ವ್ಯಕ್ತಪಡಿಸಿದೆ.