ಕ್ವೀನ್ಸ್ಟೌನ್, ನ್ಯೂಜಿಲೆಂಡ್: ಅಮೋಘ ಆಟದ ಮೂಲಕ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿರುವ ಭಾರತ ತಂಡ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎಂದು ನಾಯಕ ಪೃಥ್ವಿ ಶಾ ಭರವಸೆ ವ್ಯಕ್ತಪಡಿಸಿದರು.
ಬಿ ಗುಂಪಿನಲ್ಲಿ ಸ್ಥಾನ ಗಳಿಸಿದ್ದ ಭಾರತ ಮೊದಲ ಪಂದ್ಯಲ್ಲಿ ಆಸ್ಟ್ರೇಲಿಯಾವನ್ನು 100 ರನ್ಗಳಿಂದ ಮಣಿಸಿತ್ತು. ನಂತರ ಪಪುವಾ ನ್ಯೂಗಿನಿ ಮತ್ತು ಜಿಂಬಾಬ್ವೆ ವಿರುದ್ಧ 10 ವಿಕೆಟ್ಗಳ ಜಯ ಸಾಧಿಸಿತ್ತು.
‘ನಮ್ಮದು ಸಾಂಘಿಕ ಪ್ರಯತ್ನ. ಇಲ್ಲಿಯ ವರೆಗೆ ಎಲ್ಲ ಆಟಗಾರರು ಉತ್ತಮ ಸಹಕಾರ ನೀಡಿದ್ದಾರೆ. ಮುಂದಿನ ಪಂದ್ಯಗಳಲ್ಲೂ ಇದೇ ರೀತಿಯಲ್ಲಿ ಸಂಘಟನಾತ್ಮಕ ಆಟ ಆಡಿದರೆ ಗೆಲುವು ಸುಲಭ’ ಎಂದು ಅವರು ಹೇಳಿದರು.