ಅಜ್ಜಂಪುರ: ಸಮೀಪದ ಗಡೀಹಳ್ಳಿ ಗ್ರಾಮದಲ್ಲಿ ಹದಗೆಟ್ಟ ರಸ್ತೆಗಳು, ರಸ್ತೆಗೆ ಹೊಂದಿಕೊಂಡಂತಿರುವ ಸೇತುವೆ ಹಾಳಾಗಿದ್ದು, ಮನೆ ತಲುಪಲು ನಿವಾಸಿಗಳು ಪರದಾಡುವಂತಾಗಿದೆ.
ಗ್ರಾಮಕ್ಕೆ ಮೂಲಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವಿಫಲವಾಗಿದ್ದಾರೆ ಎಂದು ಗ್ರಾಮದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಗ್ರಾಮದ ಪರಪ್ಪ ಸ್ವಾಮಿ ಮಠದ ಹಿಂಭಾಗದಲ್ಲಿ ಹತ್ತಾರು ಮನೆಗಳಿದ್ದು, ಮನೆ ತಲುಪಲು ಇರುವ ರಸ್ತೆಯಲ್ಲಿದ್ದ ಸೇತುವೆಯನ್ನು ಹೊಸ ದಾಗಿ ನಿರ್ಮಿ ಸುವುದಾಗಿ ಹೇಳಿ, ಎರಡು ವರ್ಷಗಳ ಹಿಂದೆ ತೆರವುಗೊ ಳಿಸಲಾ ಗಿತ್ತು. ಆದರೆ ಈವರೆಗೂ ಕಾಮಗಾರಿ ನಡೆದಿಲ್ಲ. ಈ ಬಗ್ಗೆ ಹಲವು ಬಾರಿ ಜನಪ್ರತಿನಿಧಿಗಳಿಗೆ, ಪಿಡಿಒ ತಿಳಿಸಿದರು ಗ್ರಾಮಸಭೆಯಲ್ಲಿ ಒತ್ತಾಯಿ ಸಿದರೂ ಪ್ರಯೋಜನವಾಗಿಲ್ಲ’ ಎಂದು ನಿವಾಸಿ ರುದ್ರೇಶ್ ಅಸಮಾಧಾನ ವ್ಯಕ್ತಪಡಿಸಿ ದ್ದಾರೆ.
‘ನಾವು ಮುಖ್ಯ ರಸ್ತೆಗೆ ಹೋಗಲು 8 ಅಡಿ ಆಳದ ತಗ್ಗನ್ನು ಇಳಿದು ಏರಬೇಕಿದ್ದು, ರಸ್ತೆಯ ಆಚೀಚೆ ಬೆಳೆದಿರುವ ಅನುಪಯುಕ್ತ ಗಿಡಗಂಟಿಗಳನ್ನು ತೆರವುಗೊಳಿಸಿಲ್ಲ. ಮಳೆಗಾಲದಲ್ಲಿ ತಗ್ಗಾದ ಗುಂಡಿಯಲ್ಲಿ ನೀರು ನಿಲ್ಲುವುದರಿಂದ ಅಲ್ಲಿ ಕೆಸರಿನ ರಾಡಿ ಸೃಷ್ಟಿಯಾಗುತ್ತದೆ. ಮನೆಗಳಲ್ಲಿ ವೃದ್ಧರು ಮಕ್ಕಳಿದ್ದು ತಗ್ಗಾದ ಗುಂಡಿಯಲ್ಲಿ ಸಾಗುವಾಗ ಬೀಳುವ ಸಂಭವ ಉಂಟು. ಜತೆಗೆ ಜಾನುವಾರುಗಳನ್ನು ಮನೆಗಳತ್ತ ಕೊಂಡೊಯ್ಯಲು ಆಗುತ್ತಿಲ್ಲ’ ಎಂದು ನಿವಾಸಿ ಪಾರ್ವತಮ್ಮ ಅಳಲು ತೋಡಿಕೊಂಡರು.
ಆರು ತಿಂಗಳ ಹಿಂದೆಯಷ್ಟೆ ಗ್ರಾಮದ ಪ್ರೌಢಶಾಲೆಗೆ ಹೋಗುವ ರಸ್ತೆಯ ಒಂದು ಪಾಶ್ವದಲ್ಲಿ ಚರಂಡಿ ಕಾಮಗಾರಿ ನಡೆಸಲಾಗಿತ್ತು. ಪ್ರಸ್ತುತ ಚರಂಡಿಗೆ ಅಳವಡಿಸಿದ್ದ ಕಲ್ಲುಗಳು ಕಿತ್ತು ಬಂದಿದ್ದು, ಸಿಮೆಂಟ್ ಕಳಚಿದೆ. ಈಗಾಗಲೇ ಬಹುತೇಕ ಚಪ್ಪಡಿ ಕಲ್ಲುಗಳೂ ಸಹ ಕಾಣೆಯಾಗಿವೆ. ಚರಂಡಿ ನಿರ್ಮಾಣ ಕಾಮಗಾರಿ ಸಂಪೂರ್ಣ ಕಳಪೆ ಆಗಿರುವುದೇ ಇದಕ್ಕೆ ಸಾಕ್ಷಿ. ಈ ಬಗ್ಗೆ ಸಂಬಂಧಪಟ್ಟವರು ತನಿಖೆ ನಡೆಸಿ, ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದರು.
ಸುವರ್ಣ ಗ್ರಾಮ ಯೋಜನೆಯಡಿ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿ ನಡೆದಿದ್ದು, ರಸ್ತೆಗೆ ಹೊಂದಿಕೊಂಡಂತೆ ಚರಂಡಿಯನ್ನೂ ನಿರ್ಮಿಸಲಾಗಿದೆ. ಸ್ಥಳೀಯ ಪಂಚಾಯಿತಿಯವರು ಇದನ್ನು ಅಗೆದು ನೀರು ಪೂರೈಸುವ ಪೈಪ್ ಅಳವಡಿಸಿದ್ದಾರೆ. ಚರಂಡಿ ಮಧ್ಯಭಾಗದಲ್ಲಿಯೇ ಮನೆಗಳಿಗೆ ನೀರು ಪೂರೈಸುವ ನಳಗಳನ್ನು ಅಳವಡಿ ಸಿದ್ದಾರೆ. ಹೀಗಾಗಿ ಮನೆಗಳ ಕೊಳಚೆ ನೀರು ಸರಾಗವಾಗಿ ಹರಿಯುತ್ತಿಲ್ಲ. ಅಲ್ಲದೇ ಚರಂಡಿಯ ಕಲುಷಿತ ನೀರು ಪೈಪ್ನೊಂದಿಗೆ ಸೇರಿ ನಳದಲ್ಲಿ ಮಲಿನ ನೀರು ಪೂರೈಕೆ ಆಗುತ್ತಿದೆ’ ಎಂದಿದ್ದಾರೆ.
‘ಎರಡೂವರೆ ವರ್ಷದ ಹಿಂದೆ ಪರಪ್ಪ ಸ್ವಾಮಿ ಪಠದ ಹಿಂಭಾಗದ ಮನೆಗಳಿಗೆ ಅಗತ್ಯ ಸೇತುವೆ ನಿರ್ಮಾಣಕ್ಕೆ ಕ್ರಿಯಾ ಯೋಜನೆ ರೂಪಿಸಿ, ಮೇಲಿನ ಅಧಿಕಾರಿಗಳಿಗೆ ಕಳುಹಿಸಲಾಗಿತ್ತು. ಇನ್ನು ಎನ್ಆರ್ಇಜೆ ಕಾಮಗಾರಿಗಳಲ್ಲಿ ವೈಯಕ್ತಿಕ ಕಾಮಗಾರಿಗಳನ್ನಷ್ಟೇ ನಡೆಸಲು ಮುಂದೆ ಬರುವ ಜನರು ಇಂತಹ ಸಮುದಾಯ ಪಾಲ್ಗೊಳ್ಳುವ ಕಾಮಗಾರಿ ಕೈಗೊಳ್ಳಲು ಆಸಕ್ತಿ ವಹಿಸಲ್ಲ. ಹೀಗಾಗಿ ಸೇತುವೆ ನಿರ್ಮಾಣ ನನೆಗುದಿಗೆ ಬಿದ್ದಿದೆ’ ಎಂದು ಗಡೀಹಳ್ಳಿ ಪಂಚಾಯಿತಿ ಪಿಡಿಒ ಮಂಜಪ್ಪ ಪ್ರತಿಕ್ರಿಯಿಸಿದ್ದಾರೆ.
ಜೆ. ಒ ಉಮೇಶ್ ಕುಮಾರ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.