ಬೆಂಗಳೂರು: ಬಿಜೆಪಿಯ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭವನ್ನು ಯಶಸ್ವಿಯಾಗಿ ಸಂಘಟಿಸುವ ಜವಾಬ್ದಾರಿಯನ್ನು ಕೇಂದ್ರ ಸಚಿವ ಅನಂತಕುಮಾರ್ ಅವರಿಗೆ ವಹಿಸಲಾಗಿದೆ.
ಫೆಬ್ರುವರಿ 4ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಸಮಾರೋಪ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ.
ಕನಿಷ್ಠ ಎರಡು ಲಕ್ಷ ಜನರನ್ನು ಸೇರಿಸುವ ಗುರಿಯನ್ನು ಅಮಿತ್ ಶಾ ನೀಡಿದ್ದಾರೆ. ನವೆಂಬರ್ 2ರಂದು ಬೆಂಗಳೂರಿನಲ್ಲಿ ಯಾತ್ರೆ ಉದ್ಘಾಟನೆ ಸಮಾರಂಭಕ್ಕೆ ನಿರೀಕ್ಷಿತ ಜನ ಸೇರದೇ ಇದ್ದುದರಿಂದ ಪಕ್ಷ ಮುಜುಗರ ಅನುಭವಿಸಿತ್ತು.
ಈ ಬಾರಿ ಇದನ್ನು ತಪ್ಪಿಸಲು ಅನಂತಕುಮಾರ್ ನೇತೃತ್ವದಲ್ಲಿ ಸಮನ್ವಯ ಸಮಿತಿ ರಚಿಸಲಾಗಿದೆ.
ಸಮಿತಿಯಲ್ಲಿ ಕೇಂದ್ರ ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ. ಸದಾನಂದಗೌಡ, ಶಾಸಕರಾದ ಆರ್. ಅಶೋಕ್, ಎಸ್. ಮುನಿರಾಜು, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅರವಿಂದ ಲಿಂಬಾವಳಿ, ಶೋಭಾ ಕರಂದ್ಲಾಜೆ, ಬೆಂಗಳೂರಿನ ಪ್ರಮುಖರಾದ ಸುಬ್ಬ ನರಸಿಂಹ, ಪಿ.ಎನ್.ಸದಾಶಿವ, ಜಯದೇವ ಅವರಿದ್ದಾರೆ ಎಂದು ಮೂಲಗಳು ತಿಳಿಸಿವೆ.