ಬೆಂಗಳೂರು: ‘ಕುರಿ–ಮೇಕೆಗಳಿಗೆ ಲಸಿಕೆ ಹಾಕುವುದನ್ನು ಕಡ್ಡಾಯ ಮಾಡುತ್ತೇವೆ’ ಎಂದು ಪಶುಸಂಗೋಪನಾ ಮತ್ತು ರೇಷ್ಮೆ ಸಚಿವ ಎ.ಮಂಜು ತಿಳಿಸಿದರು.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ರೇಷ್ಮೆ, ಕುರಿ ಹಾಗೂ ಹಸು ಸಾಕಣೆ ಲಾಭದಾಯಕ ಕಸುಬು. ಇದರಲ್ಲಿ ತೊಡಗಿಸಿಕೊಂಡಿರುವ ರೈತರು ನಷ್ಟ ಅನುಭವಿಸಿಲ್ಲ. ಒಕ್ಕಲಿಗರು ಹಾಗೂ ಲಿಂಗಾಯತರು ಸಹ ಕುರಿ ಸಾಕಣೆ ಮಾಡುತ್ತಿದ್ದಾರೆ. ಕುರುಬರಿಗೆ ಮಾತ್ರ ಈ ಕಸುಬು ಸೀಮಿತವಲ್ಲ’ ಎಂದರು.
ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಕೃಷ್ಣ ಮಾತನಾಡಿ, ‘ನಿಗಮಕ್ಕೆ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪಿಸಲು ಬಜೆಟ್ನಲ್ಲಿ ಹಣ ಮೀಸಲಿಡುವಂತೆ ಮನವಿ ಮಾಡಿದ್ದೇವೆ’ ಎಂದು ತಿಳಿಸಿದರು.
‘ಕುರಿಗಳು ಸತ್ತರೆ ₹5,000 ಪರಿಹಾರ ನೀಡುತ್ತಿದ್ದೇವೆ. ಕುರಿಗಾರರು ಮರಣ ಹೊಂದಿದರೆ ಪರಿಹಾರ ನೀಡುವಂತೆ ಮನವಿ ಸಲ್ಲಿಸಿದ್ದೇವೆ’ ಎಂದರು.