ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಿವಾಸದಲ್ಲಿ ಇಬ್ಬರು ಬಿಜೆಪಿ ಮೇಯರ್ಗಳು ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ವಿಜೇಂದ್ರ ಗುಪ್ತಾ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ನಾಲ್ವರು ಎಎಪಿ ಶಾಸಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಶಾಸಕರಾದ ಜರ್ನೈಲ್ ಸಿಂಗ್, ಅಖಿಲೇಶ್ ತ್ರಿಪಾಠಿ, ಜಿತೇಂದ್ರ ತೋಮರ್ ಹಾಗೂ ಸಂಜೀವ್ ಝಾ ಅವರ ಹೆಸರು ಎಫ್ಐಆರ್ನಲ್ಲಿ ಉಲ್ಲೇಖವಾಗಿದೆ. ದೆಹಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವೀಂದ್ರ ಗುಪ್ತಾ ಅವರ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜನವರಿ 30ರಂದು ಕೇಜ್ರಿವಾಲ್ ನಿವಾಸದಲ್ಲಿ ಬಿಜೆಪಿ ನಿಯೋಗದ ಜೊತೆ ಎಎಪಿ ಮುಖಂಡರು ಅನುಚಿತವಾಗಿ ವರ್ತಿಸಿದರು ಎಂದು ವಿಜೇಂದ್ರ ಗುಪ್ತಾ ಆರೋಪಿಸಿದ್ದಾರೆ. ಅಕ್ರಮ ಕಟ್ಟಡ ತೆರವು ಆದೇಶ ಸಂಬಂಧ ವರ್ತಕರ ಪರವಾಗಿ ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಲು ನಿಯೋಗ ತೆರಳಿತ್ತು.
ದೆಹಲಿ ಉತ್ತರದ ಮೇಯರ್ ಪ್ರೀತಿ ಅಗರ್ವಾಲ್, ದೆಹಲಿ ಪೂರ್ವ ಮೇಯರ್ ನೀಮಾ ಭಗತ್, ಗುಪ್ತಾ ಅವರ ಆಪ್ತ ಸಹಾಯಕನ ಮೇಲೆ ಶಾಸಕರು ಹಾಗೂ ಅವರ ಬೌನ್ಸರ್ಗಳು ಹಲ್ಲೆ ನಡೆಸಿದರು ಎಂದು ಆರೋಪಿಸಲಾಗಿದೆ.
ಎಫ್ಐಆರ್ನಲ್ಲಿ ಹೆಸರಿರುವ ಶಾಸಕರನ್ನು ತಕ್ಷಣ ಬಂಧಿಸುವಂತೆ ಬಿಜೆಪಿಯು ಗುರುವಾರ ಆಗ್ರಹಿಸಿತ್ತು.